
ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ 200ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ₹33.81 ಲಕ್ಷ ವಂಚಿಸಲಾಗಿದೆ.
‘ವಾಟ್ಸ್ಆ್ಯಪ್ ಗ್ರೂಪ್ಗೆ ನನ್ನ ಮೊಬೈಲ್ ಸಂಖ್ಯೆಯನ್ನು ಸೇರಿಸಿದ್ದ ಅಪರಿಚಿತರು, ಷೇರು ಮಾರುಕಟ್ಟೆಯ ಹೂಡಿಕೆ, ಲಾಭಾಂಶದ ಬಗ್ಗೆ ನಿರಂತರವಾಗಿ ಸಂದೇಶ ಕಳುಹಿಸುತ್ತಿದ್ದರು. ತಾವು ಸೂಚಿಸಿದಂತೆ ಹೂಡಿಕೆ ಮಾಡಿದರೆ ಶೇ 200ರಷ್ಟು ಲಾಭ ಖಚಿತ ಎಂದು ನಂಬಿಸಿದ್ದರು. ಅವರ ಸಂದೇಶಗಳನ್ನು ನಂಬಿ ಹಂತ ಹಂತವಾಗಿ ₹33.81 ಲಕ್ಷ ಹೂಡಿಕೆ ಮಾಡಿದ್ದೇನೆ. ಕೊನೆಗೆ ಲಾಭಾಂಶವಿರಲಿ, ನಾನು ಹೂಡಿಕೆ ಮಾಡಿದ ಹಣವನ್ನೂ ನೀಡದೇ ಮೋಸ ಮಾಡಿದ್ದಾರೆ’ ಎಂದು ಹರಿಹರದ ನಿವಾಸಿ, ವೃತ್ತಿಯಲ್ಲಿ ಸೇಲ್ಸ್ಮ್ಯಾನ್ ಆಗಿರುವ ವ್ಯಕ್ತಿಯು ದೂರು ನೀಡಿದ್ದಾರೆ.
ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್ಲೈನ್ ಮೂಲಕ ₹15.72 ಲಕ್ಷ ವಂಚನೆ
ದಾವಣಗೆರೆ: ಆನ್ಲೈನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ₹15.72 ಲಕ್ಷ ವಂಚಿಸಲಾಗಿದೆ.
‘ಪಾರ್ಟ್ ಟೈಮ್ ಕೆಲಸ ಇದೆ ಎಂದು ಟೆಲಿಗ್ರಾಮ್ನಲ್ಲಿ ಮೆಸೇಜ್ ಬಂದಿತ್ತು. ಅದನ್ನು ಕ್ಲಿಕ್ ಮಾಡಿದಾಗ ನಾವು ಕಳಿಸಿದ ಪೋಸ್ಟ್ಗಳನ್ನು ಪ್ರಮೋಟ್ ಮಾಡಿದರೆ ಹಣ ನೀಡುವುದಾಗಿ ಸಂದೇಶ ಬಂತು. ಲಿಂಕ್ ಬಳಸಿ ಹೆಸರು ನೋಂದಾಯಿಸಿಕೊಂಡಾಗ ಬೋನಸ್ ರೂಪದಲ್ಲಿ ₹10,000 ನನ್ನ ಖಾತೆಗೆ ವರ್ಗಾವಣೆಯಾಗಿತ್ತು. ಆರಂಭದಲ್ಲಿ ಹಣ ಬಂದಿದ್ದರಿಂದ ಆ ಲಿಂಕ್ಗಳನ್ನು ಬಳಸಿಕೊಂಡು ಹಂತ ಹಂತವಾಗಿ ₹15.72 ಲಕ್ಷ ಮೊತ್ತವನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದೇನೆ’ ಎಂದು ಜಾಲಿನಗರದ ನಿವಾಸಿ, ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ.
ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.