ADVERTISEMENT

‘ಸ್ವದೇಶಿ’ ಜಾಗೃತಿಗಾಗಿ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:51 IST
Last Updated 30 ಡಿಸೆಂಬರ್ 2025, 8:51 IST
ಬೆಂಗಳೂರಿನಿಂದ ಆರಂಭವಾಗಿರುವ ಸೈಕಲ್ ಜಾಥಾ ಸೋಮವಾರ ದಾವಣಗೆರೆ ತಲುಪಿತು
ಬೆಂಗಳೂರಿನಿಂದ ಆರಂಭವಾಗಿರುವ ಸೈಕಲ್ ಜಾಥಾ ಸೋಮವಾರ ದಾವಣಗೆರೆ ತಲುಪಿತು    

ದಾವಣಗೆರೆ: ‘ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕು ಎನ್ನುವ ತುಡಿತದಿಂದ ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದೇವೆ’ ಎಂದು ಬ್ರಿಗೇಡಿಯರ್ ರವಿ ಮುನಿಸ್ವಾಮಿ ಹೇಳಿದರು. 

ಯೂತ್ ಫಾರ್ ನೇಷನ್ ಮತ್ತು ಸ್ವದೇಶಿ ಜಾಗರಣ (ಬೆಂಗಳೂರು ಮತ್ತು ಗ್ರಾಮೀಣ ಕರ್ನಾಟಕ) ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನಿಂದ ಆರಂಭವಾಗಿರುವ ಸೈಕಲ್ ಜಾಥಾ ಸೋಮವಾರ ನಗರಕ್ಕೆ ಆಗಮಿಸಿತು. ಈ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

‘ಸ್ವದೇಶಿ ವಸ್ತುಗಳನ್ನೇ ಬಳಸುವುದರಿಂದ ದೇಶದ ಆರ್ಥಿಕ ವ್ಯವಸ್ಥೆ ಬಲಗೊಳ್ಳುತ್ತದೆ. ಸ್ಥಳೀಯವಾಗಿ ಬೆಳೆದ ಧಾನ್ಯ, ತರಕಾರಿಗಳನ್ನು ಉಪಯೋಗಿಸುವುದರಿಂದ ನಮ್ಮ ರೈತರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು. 

ADVERTISEMENT

‘ಡಿ.13 ರಂದು ಬೆಂಗಳೂರಿನಿಂದ ಆರಂಭಿಸಿ ಮೊದಲ ಹಂತದಲ್ಲಿ ಕರಾವಳಿ ಭಾಗ ಸೇರಿ 10 ಜಿಲ್ಲೆಗಳಿಗೆ ಭೇಟಿ ನೀಡಿ 920 ಕಿ.ಮೀ. ಕ್ರಮಿಸಲಾಗಿದೆ. 2ನೇ ಹಂತದಲ್ಲಿ ಚನ್ನರಾಯಪಟ್ಟಣ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಇನ್ನಿತರ ಜಿಲ್ಲೆಗಳ ಮಾರ್ಗವಾಗಿ ಇದುವರೆಗೆ 460 ಕಿ.ಮೀ. ಸಂಚರಿಸಲಾಗಿದೆ’ ಎಂದು ತಿಳಿಸಿದರು. 

‘ಒಂದು ದಿನಕ್ಕೆ 100 ರಿಂದ 120 ಕಿ.ಮೀ. ತೆರಳುತ್ತೇವೆ. ಶಾಲೆ, ಕಾಲೇಜುಗಳು, ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. 31 ಜಿಲ್ಲೆಗಳಿಗೆ ತೆರಳಿ 3,600 ಕಿ.ಮೀ. ಕ್ರಮಿಸುವ ಗುರಿಯಿದೆ. ನಮ್ಮ ತಂಡದಲ್ಲಿ 17 ಜನರಿದ್ದೇವೆ. ಮೈಸೂರು, ತಮಿಳುನಾಡು, ತೆಲಂಗಾಣ, ದೆಹಲಿಯಿಂದ ಬಂದವರೂ ಇದ್ದಾರೆ. ಹೆಚ್ಚಿನವರು 60 ವರ್ಷ ಮೇಲ್ಪಟ್ಟವರೇ ಇದ್ದಾರೆ. 75 ವರ್ಷದ ಹಿರಿಯರೊಬ್ಬರು ತಂಡದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದರು.  

ಕರ್ನಲ್ ಕಂದಸಾಮಿ, ವಿಜ್ಞಾನಿ ನೀಲಕಂಠ, ರಮೇಶ್ ಎನ್., ವೇದಮೂರ್ತಿ, ಜಹೀರ್ ಷರೀಫ್, ಸಹಸ್ರನಾಮಮ್ ಐಯರ್, ಶಾಂತಾ ಅಧಿಯಪ್ಪ, ವರ್ತಮಾನ ಫೋರಂನ ತಿಪ್ಪೇಸ್ವಾಮಿ, ಪ್ರಸಾದ್ ಬಂಗೇರ, ಶ್ರೀನಿವಾಸ್, ನವೀನ್, ಬೈಸಿಕಲ್ ಕ್ಲಬ್‌ನ ಮಹೇಶ್ ಇನ್ನಿತರರಿದ್ದರು. 

ಸ್ವದೇಶಿ ವಸ್ತುಗಳ ಬಳಕೆ ಭಾರತೀಯ ಸಂಸ್ಕೃತಿ ಮತ್ತು ಕೃಷಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಜಾಥಾದ ಉದ್ದೇಶವಾಗಿದೆ.
ರವಿ ಮುನಿಸ್ವಾಮಿ ಬ್ರಿಗೇಡಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.