ದಾವಣಗೆರೆ: ‘ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಡೇಟಾ ಸೆಂಟರ್ ಆರಂಭಿಸುವುದರಿಂದ ಸಾಕಷ್ಟು ದಾಖಲೆಗಳನ್ನು ಸರ್ವರ್ನಲ್ಲಿ ಸಂಗ್ರಹಿಸಿಡಬಹುದು. ಇದರಿಂದ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅಧ್ಯಯನಕ್ಕೆ ನೆರವಾಗಲಿದೆ. ಡೇಟಾ ಸೆಂಟರ್ಗಾಗಿ ಮೂಲ ಸೌಲಭ್ಯವುಳ್ಳ 25–30 ಎಕರೆ ಜಾಗ ನೀಡಲಾಗುತ್ತಿದೆ. ಆದಷ್ಟು ಶೀಘ್ರವೇ ಡೇಟಾ ಸೆಂಟರ್ ಆರಂಭಿಸಲಾಗುವುದು’ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಇಲ್ಲಿನ ಬಿಐಇಟಿ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಜಿಲ್ಲಾಡಳಿತ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ಹಾಗೂ ವಿಷನ್ ದಾವಣಗೆರೆ ಸಹಯೋಗದಲ್ಲಿ ಶುಕ್ರವಾರ ನಡೆದ ಕೌಶಲ ಅಭಿವೃದ್ಧಿ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಭಾರತ ಮಾತ್ರವಲ್ಲದೇ ಜಾಗತಿಕವಾಗಿಯೂ ದಾಖಲೆಗಳನ್ನು ಸರ್ವರ್ನಲ್ಲಿ ಇರಿಸುವುದು ಅತ್ಯಗತ್ಯವಾಗಿದೆ. ಮುಂದೊಂದು ದಿನ ದಾವಣಗೆರೆಯು ಐಟಿ ಹಬ್ ಆಗಲಿದೆ ಎಂಬ ವಿಶ್ವಾಸದೊಂದಿಗೆ ‘ದಾವಣಗೆರೆ ವಿಷನ್’ ತಂಡ ಕಾರ್ಯ ನಿರ್ವಹಿಸುತ್ತಿದೆ’ ಎಂದು ತಿಳಿಸಿದರು.
‘ಇಲ್ಲಿನ ಜನರ ಸಾಫ್ಟ್ವೇರ್ ಪಾರ್ಕ್ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ. ಇಲ್ಲಿ ಎಂಜಿನಿಯರಿಂಗ್ ಮುಗಿಸಿ ಉದ್ಯೋಗಕ್ಕಾಗಿ ಬೆಂಗಳೂರು ಅಥವಾ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಗೆ ಹೋಗುವುದು ತಪ್ಪಲಿದೆ. ಇಲ್ಲಿಯೇ ಉದ್ಯೋಗ ದೊರಕಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ’ ಎಂದು ಹೇಳಿದರು.
‘ವಿದ್ಯಾಕಾಶಿ ದಾವಣಗೆರೆಯಲ್ಲಿ ಐಟಿ ಪಾರ್ಕ್ಗೆ ಪೂರಕವಾದ ವಾತಾವರಣ ಇದೆ. ರಾಷ್ಟ್ರೀಯ ಹೆದ್ದಾರಿ ಸೌಲಭ್ಯ ಇದೆ. ಹತ್ತಿರದಲ್ಲೇ ವಿಮಾನ ನಿಲ್ದಾಣಗಳಿವೆ. ನೀರಿನ ವ್ಯವಸ್ಥೆಯೂ ಉತ್ತಮವಾಗಿದೆ. ಇದನ್ನು ಹೂಡಿಕೆದಾರರು, ಕಂಪನಿಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ಲೋಕಸಭಾ ಚುನಾವಣೆ ವೇಳೆ ವಿದ್ಯಾರ್ಥಿಗಳು ಐಟಿ ಪಾರ್ಕ್ಗೆ ಬೇಡಿಕೆ ಇಟ್ಟಿದ್ದರು. ಅವರ ಬಯಕೆಯಂತೆ ಐಟಿ ಪಾರ್ಕ್ ಆರಂಭಿಸಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಅ.15, 16 ರಂದು ಕೃತಕ ಬುದ್ಧಿಮತ್ತೆ (ಎಐ), ಬಿಗ್ ಡೇಟಾ, ಎಡಿಎ ಟೂಲ್ಸ್, ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್, ಡಿಸೈನ್ ಐಪಿಗಳು ರೊಬೋಟಿಕ್ಸ್ ಇನ್ ಎಜ್ಯುಕೇಷನ್ ಇಂಡಸ್ಟ್ರಿ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ತಂತ್ರಾಂಶಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಐಟಿ ಹಬ್ ಉದ್ದೇಶದಿಂದ ಅಧಿಕಾರಿಗಳ ತಂಡದೊಂದಿಗೆ ಬೆಂಗಳೂರಿನ ಐಟಿಬಿಟಿ ಕಂಪನಿಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ, ಬೇಡಿಕೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಅದೇ ಉದ್ದೇಶದಿಂದ ದಾವಣಗೆರೆಯಲ್ಲಿ ಮೊದಲಿಗೆ ಎರಡು ಎಕರೆ ಜಾಗ ಗುರುತಿಸಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೀಟಿಂಗ್ ಹಾಲ್ ಒಳಗೊಂಡ ಎಸ್ಟಿಪಿಐ ಕೇಂದ್ರ ಸ್ಥಾಪಿಸಲಾಯಿತು’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸುತ್ತಿದ್ದಾರೆ. ಇಂಟೆಲ್ ಕಂಪನಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಇಂತಹ 35ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ನಗರದಲ್ಲಿ ಘಟಕ ತೆರೆಯಲು ಉತ್ಸುಕತೆ ತೋರುತ್ತಿವೆ’ ಎಂದರು.
ಇಂಟೆಲ್ ಇಂಡಿಯಾ ಕಂಪನಿಯ ಆಪರೇಷನ್ಸ್ ಮ್ಯಾನೇಜರ್ ಸ್ಯಾಮ್ಯೂಯಲ್ ದೊರೈರಾಜ್, ಕೆಡಿಇಎಂ ಪ್ರೋಗ್ರಾಂ ಡೈರೆಕ್ಟರ್ ಸುವಿನ್ ನಾರಾಯಣ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಜೈನ್ ಕಾಲೇಜು, ಯುಬಿಡಿಟಿ, ಜಿಎಂಐಟಿ ಕಾಲೇಜು ಮತ್ತು ಬಿಐಇಟಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.