ADVERTISEMENT

ದಾವಣಗೆರೆ ನಗರದಲ್ಲಿ ಮ್ಯಾರಥಾನ್ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:51 IST
Last Updated 2 ಮಾರ್ಚ್ 2026, 2:51 IST
ಮ್ಯಾರಥಾನ್‌ನಲ್ಲಿ ಗುರಿಯತ್ತ ಸಾಗುತ್ತಿರುವ ಸ್ಪರ್ಧಿಗಳು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಮ್ಯಾರಥಾನ್‌ನಲ್ಲಿ ಗುರಿಯತ್ತ ಸಾಗುತ್ತಿರುವ ಸ್ಪರ್ಧಿಗಳು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ನಾಗರಿಕರು, ಕ್ರೀಡಾಪಟುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಅಪಾರ ಸಂಖ್ಯೆಯ ಜನರು ಟೀ ಶರ್ಟ್‌ ಹಾಗೂ ಸ್ಪೋರ್ಟ್ಸ್‌ ಶೂ ಧರಿಸಿ ಮೈದಾನದಲ್ಲಿ ಸೇರಿದ್ದರು. 

‘ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ 3ನೇ ಬಾರಿಗೆ ಆಯೋಜಿಸಿದ್ದ ‘ಪೊಲೀಸರೊಂದಿಗೆ ಮ್ಯಾರಥಾನ್‌’ನಲ್ಲಿ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡು ಹೆಜ್ಜೆ ಹಾಕಿದರು. ‘ಡ್ರಗ್ಸ್‌ ಮುಕ್ತ ದಾವಣಗೆರೆ’, ‘ಸೈಬರ್‌ ಸುರಕ್ಷತೆ ನಗರ’ದ ಬಗ್ಗೆ ಜಾಗೃತಿ ಮೂಡಿಸಲಾಯಿತು. 

ನಗರ ಮಾತ್ರವಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಓಡಲು ಸಜ್ಜಾಗಿಯೇ ಬಂದಿದ್ದ ಸ್ಪರ್ಧಿಗಳು ಧ್ವನಿವರ್ಧಕದ ಸದ್ದಿಗೆ ನೃತ್ಯವನ್ನೂ ಮಾಡಿ ವಾರ್ಮ್‌ಅಪ್‌ ಮುಗಿಸಿದರು. 18 ವರ್ಷ ಮೇಲ್ಪಟ್ಟ ಸ್ಪರ್ಧಿಗಳು 5 ಕಿ.ಮೀ. ಹಾಗೂ 10 ಕಿ.ಮೀ. ವಿಭಾಗಗಳಲ್ಲಿ ಕಣಕ್ಕಿಳಿದರು. ಒಟ್ಟು 1,200 ಕ್ಕೂ ಹೆಚ್ಚು ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದರು. 

ADVERTISEMENT

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಮ್ಯಾರಥಾನ್‌ ನಗರದ ವಿವಿಧ ಭಾಗಗಳಲ್ಲಿ ಸಾಗಿತು. 10 ಕಿ.ಮೀ. ಮ್ಯಾರಥಾನ್‌ ಡೆಂಟಲ್‌ ಕಾಲೇಜು ರಸ್ತೆ, ಶಾಮನೂರು ರಸ್ತೆ, ಬಾಪೂಜಿ ಬ್ಯಾಂಕ್‌ ಸಮುದಾಯ ಭವನ, ರಿಂಗ್ ರಸ್ತೆ, ಪಿ.ಬಿ. ರಸ್ತೆಯ ಮೂಲಕ ಕ್ರೀಡಾಂಗಣಕ್ಕೆ ಮರಳಿದರೆ, 5 ಕಿ.ಮೀ.  ಮ್ಯಾರಥಾನ್‌ ಡೆಂಟಲ್‌ ಕಾಲೇಜು ರಸ್ತೆ, ಆಂಜನೇಯ ಬಡಾವಣೆ, ವಿದ್ಯಾನಗರ, ಹದಡಿ ರಸ್ತೆ ಮಾರ್ಗವಾಗಿ ಕ್ರೀಡಾಂಗಣ ತಲುಪಿತು. 

50 ಕ್ಕಿಂತ ಹೆಚ್ಚಿನ ವಯಸ್ಸಾದವರೂ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಟೀಶರ್ಟ್‌ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು. ಸಾರ್ವಜನಿಕ ವಿಭಾಗದಲ್ಲಿ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿ ಗಮನ ಸೆಳೆದರು. 

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಟಿ. ಶೇಖರ್‌, ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಪರಮೇಶ್ವರ ಹೆಗಡೆ, ಡಿವೈಎಸ್‌ಪಿಗಳಾದ ಡಿ.ಎಸ್. ಪ್ರಕಾಶ್, ರುದ್ರಪ್ಪ ಉಜ್ಜನಕೊಪ್ಪ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಎಂ. ಕುಮಾರ್‌, ಮುಖ್ಯ ವ್ಯವಸ್ಥಾಪಕ ಕೆ.ಸುರೇಶ್‌ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು. 

ಮ್ಯಾರಥಾನ್ ವಿಜೇತರ ವಿವರ 

10 ಕಿ.ಮೀ. ಸಾರ್ವಜನಿಕ (ಮುಕ್ತ) ವಿಭಾಗದಲ್ಲಿ ರಿಹಾನ್‌ (ಪ್ರಥಮ) ಮನು (ದ್ವಿತೀಯ) ಕೀರ್ತಿ (ತೃತೀಯ) ನಗದು ಬಹುಮಾನ ಪಡೆದರು. ಪೊಲೀಸ್ ವಿಭಾಗದಲ್ಲಿ ಕ್ರಮವಾಗಿ ಕಿರಣ್‌ಕುಮಾರ್ ನಾಗರಾಜ್ ಕೆ. ಸಂಪತ್‌ ನಾಯ್ಕ ಗೆಲುವಿನ ನಗೆ ಬೀರಿದರು.  5 ಕಿ.ಮೀ ಸಾರ್ವಜನಿಕ ವಿಭಾಗದಲ್ಲಿ ಮಹಮ್ಮದ್ ತೌಸಿಫ್ (ಪ್ರಥಮ) ಮಹಮ್ಮದ್ ಗೌಸ್ ಜಿ.ಎಂ. (ದ್ವಿತೀಯ) ಪುಟ್ಟಪ್ಪ (ತೃತೀಯ) ನಗದು ಬಹುಮಾನ ಪಡೆದರು. ಪೊಲೀಸ್ ವಿಭಾಗದಲ್ಲಿ ಕ್ರಮವಾಗಿ ಹನುಮಂತ ಎನ್. ಪ್ರದೀಪ್ ಚೌಹಾಣ್ ಹುಲಿಗೇಶ್ ಕೆ. ಪ್ರಶಸ್ತಿಗೆ ಕೊರಳೊಡ್ಡಿದರು.  5 ಕಿ.ಮೀ ಮಹಿಳೆಯರ ವಿಭಾಗದಲ್ಲಿ ಅಕ್ಷತಾ ಎ. (ಪ್ರಥಮ) ಅರ್ಚನಾ ಗಾಯಕ್ವಾಡ್ (ದ್ವಿತೀಯ) ಉಮಾ ಭಾರತಿ (ತೃತೀಯ) ಗೆದ್ದು ಸಂಭ್ರಮಿಸಿದರು.  10 ಕಿ.ಮೀ. ವಿಭಾಗದಲ್ಲಿ ಪ್ರಥಮ ₹ 20000 ದ್ವಿತೀಯ ₹ 10000 ಹಾಗೂ ತೃತೀಯ ₹ 5000 ನಗದು ಬಹುಮಾನ ವಿತರಿಸಲಾಯಿತು. 5 ಕಿ.ಮೀ ವಿಭಾಗದಲ್ಲಿ ಪ್ರಥಮ ₹ 10000 ದ್ವಿತೀಯ ₹ 5000 ಹಾಗೂ ತೃತೀಯ ₹ 3000 ನಗದು ಬಹುಮಾನ ನೀಡಲಾಯಿತು. ಮಹಿಳೆಯರಿಗೆ 5 ಕಿ.ಮೀ. ವಿಭಾಗದಲ್ಲಿ ಪ್ರತ್ಯೇಕವಾಗಿ ನಗದು ಬಹುಮಾನ ವಿತರಿಸಲಾಯಿತು. 

ಮ್ಯಾರಥಾನ್‌ಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಇನ್ನಿತರ ಗಣ್ಯರು ಚಾಲನೆ ನೀಡಿದರು