ಸಂತೇಬೆನ್ನೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ಪಠ್ಯವನ್ನು ರಂಗ ಪ್ರಯೋಗದ ಮೂಲಕ ಅಭ್ಯಸಿಸುವ ಮೂಲಕ ಭಿನ್ನ ಪ್ರಯೋಗಕ್ಕೆ ಇಳಿದಿದ್ದಾರೆ.
ಕನ್ನಡ ಭಾಷಾ ಪಠ್ಯದಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ ರಚಿತ ‘ಬಿಲ್ಲುಹಬ್ಬ’ ನಾಟಕವನ್ನು ಮನೋಜ್ಞ ಅಭಿನಯದ ಮೂಲಕ ಮನದಟ್ಟು ಮಾಡಿದ್ದಾರೆ.
ತರಗತಿಯ ಕೊಠಡಿಯಲ್ಲೇ ನಾಟಕ ಪ್ರದರ್ಶಿಸುವ ಮೂಲಕ ಪಠ್ಯ ಕಲಿಕೆಗೆ ಭಿನ್ನ ಆಯಾಮ ನೀಡಿದ್ದಾರೆ. ನಾಟಕದುದ್ದಕ್ಕೂ ಅಭಿನಯದಲ್ಲಿ ಮಕ್ಕಳು ಚಾಕಚಾಕ್ಯತೆ ಮೆರೆದಿದ್ದಾರೆ. ಕೃಷ್ಣನಿಂದ ಕಂಸನ ವಧೆಯ ಸಂದರ್ಭವನ್ನು ನಾಟಕ ಪ್ರಸ್ತುತಪಡಿಸುತ್ತದೆ. ಕಂಸನು ತನ್ನ ಮಂತ್ರಿ ಹಾಗೂ ಗೂಢಚಾರರೊಂದಿಗೆ ನಡೆಸುವ ಭೀತಿ ತುಂಬಿದ ದೃಶ್ಯದ ಸಂಭಾಷಣೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿತು.
‘ವಸುದೇವ ಹಾಗೂ ದೇವಕಿಯ ಬಂಧನದ ಸ್ಥಳಕ್ಕೆ ಪ್ರವೇಶಿಸುವ ಕಂಸನ ದ್ವೇಷಭರಿತ ವಿನೀತ ಭಾವನೆಗಳ ಪ್ರದರ್ಶನ, ವಸುದೇವ ಹಾಗೂ ದೇವಕಿ ಕೈಗೆ ಸರಪಳಿ ಬಿಗಿದ ಸನ್ನಿವೇಶದಲ್ಲಿಯೂ ಕೃಷ್ಣನ ಇರುವಿಕೆ ಬಗ್ಗೆ ಸ್ಪಷ್ಟತೆ ನೀಡದ ಸಂಭಾಷಣಾ ಶೈಲಿ, ಕಂಸನ ಹತಾಶೆ ತುಂಬಿದ ದನಿಯಲ್ಲಿ ಬರುವ ಮಾತುಗಳು ನೈಜ ಸನ್ನಿವೇಶ ಸೃಷ್ಟಿಸಿದಂತೆ ಕಂಡವು. ಒಟ್ಟಾರೆ ಪಠ್ಯವನ್ನು ರಂಗ ಪ್ರಯೋಗದಲ್ಲಿ ಮೂಡಿಸಿದ್ದು ಸಂತಸ ನೀಡಿದೆ’ ಎನ್ನುತ್ತಾರೆ ತರಬೇತಿ ನೀಡಿದ ಶಿಕ್ಷಕಿ ಎಚ್.ಎಂ. ಅಂಜಲಿದೇವಿ.
‘ಪೌರಾಣಿಕ ಉಡುಗೆ– ತೊಡುಗೆಯನ್ನು ಮನೆಯಿಂದಲೇ ತಯಾರಿಸಿ ತಂದೆವು. ಆಭರಣ, ಕಿರೀಟಗಳನ್ನು ಶಿಕ್ಷಕರು ಕೊಡಿಸಿದರು. ಒಂದೆರಡು ದಿನ ಪಠ್ಯಪುಸ್ತಕ ಓದಿಯೇ ಅಭ್ಯಾಸ ಮಾಡಿದೆವು. ನಂತರ ಪುಸ್ತಕ ಇಲ್ಲದೆ ನಿರರ್ಗಳವಾಗಿ ಸಂಭಾಷಣೆ ಪ್ರಸ್ತುತಪಡಿಸಲು ಶ್ರದ್ಧೆ ವಹಿಸಿದೆವು. ಓದುವ ಏಕತಾನತೆಯಿಂದ ಹೊರಬಂದು ಅಭಿನಯದ ಮೂಲಕ ಪಠ್ಯ ಕಲಿಕೆಗೆ ಮುಂದಾಗಿದ್ದು ಹೊಸ ಅನುಭವ ನೀಡಿತು’ ಎನ್ನುತ್ತಾರೆ ಕಂಸನ ಪಾತ್ರಧಾರಿ ಪಿ.ಎ. ವೈಷ್ಣವಿ.
‘ಅಭಿನಯದಿಂದ ಸಹೃದಯರ ಮನ ಗೆಲ್ಲಬಹುದು. ಮನರಂಜನೆ ಜತೆಯಲ್ಲಿ ಮನಃಪರಿವರ್ತನೆಗೂ ಕಾರಣವಾಗುತ್ತದೆ. ನಾಟಕಗಳು ಆಯಾ ಕಾಲದ ಸಾಮಾಜಿಕ, ರಾಜಕೀಯ ವ್ಯವಸ್ಥೆಗೆ ಕೈಗನ್ನಡಿ. ಪೌರಾಣಿಕ ನಾಟಕಗಳು ಅಂದಿನ ಆಡಳಿತ ವ್ಯವಸ್ಥೆ, ಧೈರ್ಯ, ಭಯ, ಆತಂಕ, ತಲ್ಲಣಗಳನ್ನು ಚಿತ್ರಿಸುತ್ತವೆ’ ಎಂದು ಮುಖ್ಯಶಿಕ್ಷಕ ಎಚ್.ಎನ್.ರವಿ ಹೇಳಿದರು.
‘ಶಾಲಾ ವಾರ್ಷಿಕೋತ್ಸವಗಳಲ್ಲಿ ಅಬ್ಬರದ ಸಂಗೀತದ ನಡುವೆ ಸಿನಿಮಾ ಗೀತೆಗಳಿಗೆ ನೃತ್ಯ ಮಾಡುವುದೇ ಆಗಿದೆ. ನಾಡಿನ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ನಾಟಕಗಳಿಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಅಬ್ಬರ, ಆಡಂಬರದ ನಡುವೆ ವಿದ್ಯಾರ್ಥಿಗಳ ಇಂತಹ ರಂಗಪ್ರಯೋಗ ಭರವಸೆ ಮೂಡಿಸುತ್ತದೆ’ ಎಂದು ವಾಗ್ಮಿ ಎಂ.ಬಿ.ನಾಗರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.