
ದಾವಣಗೆರೆ: ಇಲ್ಲಿನ ಕೆ.ಬಿ. ಬಡಾವಣೆಯ ರಾಘವೇಂದ್ರಸ್ವಾಮಿ ಮಠ ಸ್ಥಾಪನೆಯಾಗಿ 50 ವರ್ಷ ಕಳೆದಿದ್ದು, ಸುವರ್ಣ ಸಂಭ್ರಮ ಮಂಗಳವಾರದಿಂದ ಆರಂಭವಾಗಿದೆ. ಫೆ.25ರವರೆಗೆ ಪ್ರವಚನ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನಕುಮಾರ್ ತಿಳಿಸಿದರು.
‘ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಫೆ.18ರಂದು ಸಂಜೆ 5ಕ್ಕೆ ಪುರಪ್ರವೇಶ ಮಾಡಲಿದ್ದು, ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಪಂಡಿತ ಬ್ರಹ್ಮಣ್ಯಾಚಾರ್ ಅವರು ‘ಪ್ರಾತಃ ಸಂಕಲ್ಪ ಗದ್ಯ’ ಕುರಿತು ಪ್ರವಚನ ನೀಡಲಿದ್ದಾರೆ. ಫೆ.19ರಂದು ಸಂಸ್ಥಾನ ಪೂಜೆಯ ಕುರಿತು ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಫೆ.20ರಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಫೆ.21ರಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಫೆ.22ರಂದು ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಫೆ. 23ರಂದು ಮುಳಬಾಗಿಲು ಪಾದರಾಜ ಮಠದ ಸುಜಯನಿಧಿ ತೀರ್ಥ ಸ್ವಾಮೀಜಿ, 24ರಂದು ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ, 25ರಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ’ ಎಂದು ವಿವವರಿಸಿದರು.
‘ಸುವರ್ಣ ಮಹೋತ್ಸವದ ಅಂಗವಾಗಿ ಮುಖ್ಯ ಪ್ರಾಣದೇವರು ಮತ್ತು ರಾಯರಿಗೆ ಸುವರ್ಣ ಕವಚ ಸಮರ್ಪಣೆ ಮಾಡಲಾಗುತ್ತಿದೆ. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಸಂಜೆ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಲ ದ್ರವ್ಯ, ತಪ, ಯೋಗ, ಸ್ವಾಧ್ಯಾಯ, ಯಜ್ಞಗಳು ನಡೆಯಲಿವೆ’ ಎಂದರು.
ಸಂಘದ ಸದಸ್ಯ ಆನಂದತೀರ್ಥಾಚಾರ್ಯ ಸಿ.ಕೆ., ರಾಮಚಂದ್ರ ರಾವ್, ಗುರುರಾಜಾಚಾರ್ಯ ಕಂಪ್ಲಿ, ವಾಚಸ್ಪತಿ ಆಚಾರ್ಯ ಕಡೂರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.