
ದಾವಣಗೆರೆ: ‘ಪರಿಶಿಷ್ಟ ಜಾತಿಗೆ ನ್ಯಾ.ಎಚ್.ಎನ್.ನಾಗಮೋಹನ ದಾಸ್ ಆಯೋಗದ ಶಿಫಾರಸ್ಸಿನಂತೆ ಯಥಾವತ್ ಒಳ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿ ವಿವಿಧ ಪಕ್ಷಗಳ ಮಾದಿಗ ಸಮುದಾಯದ ಮುಖಂಡರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಹಳೆ ಪ್ರವಾಸಿ ಮಂದಿರದಿಂದ ಜಯದೇವ ವೃತ್ತದವರೆಗೆ ರ್ಯಾಲಿ ನಡೆಸಿದ ಮುಖಂಡರು ಬಳಿಕ ಕೆಲಹೊತ್ತು ಪ್ರತಿಭಟನೆ ನಡೆಸಿದರು.
ಆಲೂರು ನಿಂಗರಾಜು ಮಾತನಾಡಿ, ‘ಒಳ ಮೀಸಲಾತಿಗೆ ಒತ್ತಾಯಿಸಿ ಮಾರ್ಚ್ 6ರಂದು ಮಾದಿಗ ಸಮುದಾಯದಿಂದ ದಾವಣಗೆರೆ ಬಂದ್ ನಡೆಸಲಾಗುವುದು. ನ್ಯಾ.ನಾಗಮೋಹನ ದಾಸ್ ಆಯೋಗದ ಶಿಫಾರಸ್ಸನ್ನು ಯಥಾವತ್ ಅನುಷ್ಠಾನಗೊಳಿಸಿ, ಒಳ ಮೀಸಲಾತಿ ಕಲ್ಪಿಸಬೇಕು. ಮೀಸಲಾತಿ ಜಾರಿ ವಿಚಾರದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಅವರು ತಮ್ಮ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಿಲ್ಲ’ ಎಂದು ದೂರಿದರು.
‘ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರ ಅಣತಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಜಾರಿಗೊಳಿಸಿದ್ದಾರೆ. 35 ವರ್ಷದಿಂದ ನಡೆಸಿಕೊಂಡು ಬಂದಿದ್ದ ಹೋರಾಟವನ್ನು ಆರೇ ತಿಂಗಳಲ್ಲಿ ಬಲಗೈ ಸಮುದಾಯದ ಮುಖಂಡರು ವ್ಯರ್ಥವಾಗುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿಗಾಗಿ ನೇಮಿಸಿದ್ದ ನಾಗಮೋಹನ ದಾಸ್ ಆಯೋಗವು ಶೇ 56 ಮೀಸಲಾತಿಯಲ್ಲಿ ಮಾದಿಗರಿಗೆ ಶೇ 6, ಹೊಲಯ ಸಂಬಂಧಿತ ಸಮುದಾಯಕ್ಕೆ ಶೇ 6, ಭೋವಿ- ಲಂಬಾಣಿ- ಕೊರಚ- ಕೊರಮ ಇತ್ಯಾದಿ ಜಾತಿಗಳಿಗೆ ಶೇ 5 ಮೀಸಲಾತಿ ನೀಡಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರಿಂದ ಒಳ ಮೀಸಲಾತಿ ಕಾಯ್ದೆಯಾಗಿ ರೂಪುಗೊಂಡಿದೆ’ ಎಂದು ಹೇಳಿದರು.
‘ಒಳ ಮೀಸಲಾತಿ ಜಾರಿಗೊಳಿಸಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಆದರೆ, ಸರ್ಕಾರ ಕೆಲವರ ಒತ್ತಡಕ್ಕೆ ಮಣಿದು, ಒಳ ಮೀಸಲಾತಿ ಕಾಯ್ದೆಯನ್ನೇ ಗಾಳಿಗೆ ತೂರಿ 56 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಶೇ 50ರ ಮೀಸಲಾತಿ ಆಧರಿತವಾಗಿ ಹಳೆ ರೋಸ್ಟರ್ ಪದ್ಧತಿಯಲ್ಲಿ ಭರ್ತಿ ಮಾಡಲು ಹೊರಟಿರುವುದು ಸರಿಯಲ್ಲ’ ಎಂದರು.
‘ಇದನ್ನೆಲ್ಲಾ ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ರಾಜ್ಯವ್ಯಾಪಿ ಹೋರಾಟದ ಕಿಚ್ಚು ಹಚ್ಚಿಸುತ್ತೇವೆ. ಒಳ ಮೀಸಲಾತಿ ಸಿಗೋವರೆಗೂ ಸುಮ್ಮನಿರಲ್ಲ. ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ಅಸ್ಪಷ್ಟ ತೀರ್ಮಾನ ಕೈಗೊಳ್ಳಬಹುದೆಂದು ಭಾವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ದಲಿತರಲ್ಲೇ ಅವಕಾಶ ವಂಚಿತ ಸಮುದಾಯಗಳು ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಮುಂದಾಗಲು ಆಡಳಿತರೂಢ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ’ ಎಂದು ದೂರಿದರು.
ಮುಖಂಡರಾದ ಎಂ.ಹಾಲೇಶ, ಎಚ್.ಸಿ.ಗುಡ್ಡಪ್ಪ, ಕಡತಿ ಅಂಜಿನಪ್ಪ, ಎ.ಕೆ.ಭೂಮೇಶ, ಅಲೆಮಾರಿ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ವಿಭೂತಿ, ರವಿಕುಮಾರ, ಪಾಂಡೋಮಟ್ಟಿ ಪ್ರಭಾಕರ, ಜಗಳೂರು ಕುಬೇರಪ್ಪ, ಪಿ.ಜೆ.ಮಹಾಂತೇಶ, ಉಚ್ಚಂಗಿ ಪ್ರಸಾದ, ಪೌರ ಚಾಲಕರ ಸಂಘದ ದುಗ್ಗೇಶ, ನಿಂಗರಾಜ, ಎಸ್.ಆರ್.ನಾಗರಾಜಪ್ಪ, ಗೋವಿಂದಪ್ಪ, ಬಿ.ನಿಂಗಪ್ಪ, ಜಿಗಣಿ ಹಾಲೇಶ, ನರಗನಹಳ್ಳಿ ರಾಮಣ್ಣ, ಕರಿಯಪ್ಪ, ದುರುಗೇಶ ಅರಸೀಕೆರೆ, ಎಚ್.ಮಹಾಂತೇಶ, ಎಚ್.ಎಂ.ಗುಡದಯ್ಯ, ಚನ್ನಗಿರಿ ಮೂರ್ತಿ, ರಾಘವೇಂದ್ರ ಕಡೇಮನಿ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಹಳೆ ರೋಸ್ಟರ್ ಪದ್ಧತಿಯಲ್ಲಿ ಹುದ್ದೆ ಭರ್ತಿಗೆ ವಿರೋಧ ಒಳ ಮೀಸಲಾತಿ ಜಾರಿಗೊಳಿಸಿ ಹುದ್ದೆ ಭರ್ತಿ ಮಾಡಿ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ
ಸಭೆ ಇಂದು
‘ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಮಾರ್ಚ್ 6ರಂದು ದಾವಣಗೆರೆ ಬಂದ್ಗೆ ಕರೆ ನೀಡಿದ್ದು ಈ ಬಗ್ಗೆ ಚರ್ಚಿಸಲು ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಮಾರ್ಚ್ 1ರಂದು ಬೆಳಿಗ್ಗೆ 11 ಗಂಟೆಗೆ ಮಾದಿಗ ಸಮುದಾಯದವರ ಪೂರ್ವಭಾವಿ ಸಭೆ ಕರೆಯಲಾಗಿದೆ’ ಎಂದು ಆಲೂರು ನಿಂಗರಾಜು ತಿಳಿಸಿದ್ದಾರೆ.