ದಾವಣಗೆರೆ: ಧೂಡಾ ಅಧ್ಯಕ್ಷರಾಗಿರುವ ದೇವರಮನಿ ಶಿವಕುಮಾರ್ ಮತ್ತು ಅವರ ಸಹೋದರರು ಅಕ್ರಮವಾಗಿ ಪ್ರಾಧಿಕಾರದ ನಿವೇಶನ ಹೊಂದಿದ್ದಾರೆ. ಇದೀಗ ಅದೇ ಧೂಡಾದಲ್ಲಿ ಮತ್ತಷ್ಟು ಭ್ರಷ್ಟಾಚಾರ ಮಾಡಲು ಅಧ್ಯಕ್ಷರಾಗಿದ್ದಾರೆ ಎಂದು ಆರೋಪಿಸಿ ಶ್ರೀರಾಮಸೇನೆ ತಾಲ್ಲೂಕು ಘಟಕವು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಎದುರು ಪ್ರತಿಭಟನೆ ನಡೆಸಿತು.
2017ರಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಎಲ್ಲ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ದೇವರಮನೆ ಶಿವಕುಮಾರ್ ಸಹೋದರರು, ಕೆಪಿಸಿಸಿ ವಕ್ತಾರ
ಡಿ. ಬಸವರಾಜ್ ಅವರಸಹೋದರರು, ಹಿಂದಿನ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಅಧ್ಯಕ್ಷ, ಆಯುಕ್ತ, ವಿವಿಧ ಅಧಿಕಾರಿಗಳು ಎಲ್ಲರೂ ಸೇರಿ ಭ್ರಷ್ಟಾಚಾರ ಎಸಗಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು
ಒತ್ತಾಯಿಸಿದರು.
ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಮಣಿಸರ್ಕಾರ್, ಉಪಾಧ್ಯಕ್ಷ ಆಲೂರು ರಾಜಶೇಖರ್, ಕಾರ್ಯದರ್ಶಿ ಸಾಗರ್, ಹೋರಾಟ ಪ್ರಮುಖ್ ಕರಾಟೆ ರಮೇಶ್, ಸಂಘಟನಾ ಕಾರ್ಯದರ್ಶಿ ವಿನೋದ್ ರಾಜ್, ಜಿಲ್ಲಾ ವ್ಯವಸ್ಥಾಪಕ್ ಸುನೀಲ್ ವಾಲಿ, ನಗರ ಅಧ್ಯಕ್ಷ ಬಿ.ಜಿ. ರಾಹುಲ್, ದಕ್ಷಿಣ ವಲಯ ಅಧ್ಯಕ್ಷ ಶಿಬಾರ್ ರಮೇಶ್, ಉತ್ತರ ವಲಯ ಅಧ್ಯಕ್ಷ ವಿನೋಧ್ ವರ್ಣೇಕರ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.