ADVERTISEMENT

ಹೂಮಳೆ ನಿರಾಕರಿಸಿದ ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 2:14 IST
Last Updated 14 ಆಗಸ್ಟ್ 2020, 2:14 IST
ಕೊವೀಡ್‌ನಿಂದ ಗುಣಮುಖರಾಗಿ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೊಗುಚ್ಛ ನೀಡಿ ಸ್ವಾಗತಿಸಿದರು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಕೊವೀಡ್‌ನಿಂದ ಗುಣಮುಖರಾಗಿ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೊಗುಚ್ಛ ನೀಡಿ ಸ್ವಾಗತಿಸಿದರು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಕೊರೊನಾದಿಂದ ಗುಣಮುಖರಾಗಿ ಗುರುವಾರ ಬಿಡುಗಡೆಗೊಂಡರು. ರೆಡ್‌ ಕಾರ್ಪೆಟ್‌ ಹಾಕಿ, ಅವರಿಗೆ ಹೂವು ಸುರಿಯಲು ಇಲಾಖೆಯ ಸಿಬ್ಬಂದಿ ಸಿದ್ಧರಾಗಿದ್ದರು. ಮಲೇಬೆನ್ನೂರಿನ ಹೆಡ್‌ಕಾನ್‌ಸ್ಟೆಬಲ್‌ ಮೃತಪಟ್ಟಿರುವುದರಿಂದ ಹೂವು ಸುರಿಮಳೆ ಬೇಡ ಎಂದು ನಿರಾಕರಿಸಿದ ಎಸ್‌ಪಿ ಹೂಗುಚ್ಛ ತೆಗೆದುಕೊಂಡು ಹೊರಬಂದರು.

‘ಇಂದಿನಿಂದ ಹೋಮ್ ಕ್ವಾರಂಟೈನ್ ಆಗಲಿದ್ದೇನೆ. ಆಸ್ಪತ್ರೆಯ ಡಿ.ಎಸ್. ಡಾ.ನಾಗರಾಜ್, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಡಾ. ಶಶಿಧರ್, ಡಾ. ಹೇಮಂತ್, ಡಾ. ರವಿ, ಡಾ.ಗಿರೀಶ್ ಹೀಗೆ ನುರಿತ ತಜ್ಞವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಕೋವಿಡ್ ಚಿಕಿತ್ಸೆ ನೀಡುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಉತ್ತಮ ಚಿಕಿತ್ಸೆ ನೀಡುವ ತಜ್ಞವೈದ್ಯರ ತಂಡವೇ ಇದೆ. ಬಾಪೂಜಿ ಮತ್ತು ಎಸ್‌ಎಸ್ ಆಸ್ಪತ್ರೆಯ ತಜ್ಞವೈದ್ಯರೂ ಇಲ್ಲಿ ಚಿಕಿತ್ಸೆ ನೀಡುತ್ತಿದ್ದು, ಉತ್ತಮ ಆಹಾರ, ಹೆಚ್ಚುವರಿ ಪೋಷಕಾಂಶಗಳ ಔಷಧ ನೀಡಲಾಗುತ್ತಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಜಿಲ್ಲೆಯ ಪ್ರಮುಖ ಕೊರೊನಾ ವಾರಿಯರ್ ಆಗಿರುವ, ಇದೀಗ ಕೊರೊನಾ ವಿನ್ನರ್ ಆಗಿರುವ ಎಸ್‌ಪಿ ಅವರ ಆತ್ಮವಿಶ್ವಾಸದ ನಡೆ ಎಲ್ಲರಲ್ಲೂ ಧೈರ್ಯ ತುಂಬಿದೆ. ಎಸ್‌ಪಿಯವರು ಜಿಲ್ಲಾ ಆಸ್ಪತ್ರೆಯಲ್ಲಿನ ವಸ್ತುಸ್ಥತಿ, ನ್ಯೂನತೆಗಳನ್ನು ಸರಿಪಡಿಸುವ ಉದ್ದೇಶದಿಂದ ಅದನ್ನೇ ಆಯ್ಕೆ ಮಾಡಿದ್ದರು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಕೋವಿಡ್‌ ಅನ್ನು ಸಮರ್ಪಕವಾಗಿ ನಿರ್ವಹಿಸಿ ಮರಣ ಪ್ರಮಾಣ ತಗ್ಗಿಸಲು ಸರ್ವೆ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಿ, ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಿ ಕೋವಿಡ್ ಲಕ್ಷಣಗಳಿರುವವರನ್ನು ಪತ್ತೆ ಹಚ್ಚಿ ಕೋವಿಡ್‌ನಿಂದ ಪಾರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಮರಣ ಪ್ರಮಾಣ ತಗ್ಗಿಸಲು ಕೇವಲ ಟಾರ್ಗೆಟ್ ರೀಚ್ ಆಗಲು ಟೆಸ್ಟ್ ಮಾಡಲಾಗುತ್ತಿದೆಯೇ ಅಥವಾ ಡೆತ್ ಪಾಕೆಟ್ಸ್‌ನಲ್ಲಿ ಹೆಚ್ಚಿನ ಟೆಸ್ಟ್ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದೇವೆ. ಡೆತ್ ಪಾಕೆಟ್ಸ್‌ ಗುರುತಿಸಿ ಹೆಚ್ಚಿನ ಟೆಸ್ಟ್ ಮಾಡಿಸಿ, ಕೋವಿಡ್ ಸಾವಿನಿಂದ ಜನರನ್ನು ಪಾರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯಾರೂ ಕೋವಿಡ್‌ಗೆ ಹೆದರಿ ರೋಗಲಕ್ಷಣಗಳನ್ನು ಮುಚ್ಚಿಡಬಾರದು. ಗಾಬರಿ ಮತ್ತು ಆತಂಕಕ್ಕೀಡಾಗದೇ ಶೀಘ್ರವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು’ ಎಂದರು.

ಈ ವೇಳೆ ಜಿಲ್ಲಾ ಆಸ್ಪತ್ರೆಯ ಡಿಎಸ್ ಡಾ.ನಾಗರಾಜ್, ಪ್ರಭಾರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.