ದಾವಣಗೆರೆ: ನಾಯಕ ಸಮಾಜದ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಸಮುದಾಯದಿಂದ ಅರ್ಜಿ ಸಲ್ಲಿಸಿದರೆ ಧೂಡಾದಿಂದ ನಿವೇಶನ ಕೊಡಿಸಲಾಗುವುದು. ಜತೆಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.
ಪಾಲಿಕೆಯ ₹ 65.89 ಲಕ್ಷ ಅನುದಾನದಲ್ಲಿ ನಾಯಕರ ವಿದ್ಯಾರ್ಥಿನಿಲಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.
‘ನಾಯಕ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮೇಲುಗೈ ಸಾಧಿಸಲು ನಮ್ಮ ಸರ್ಕಾರ ಸಹಕಾರ ನೀಡಲಿದೆ. ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಿದ್ದೇವೆಂದರೆ ಈ ಸಮಾಜದ ಬಗೆಗೆ ಸರ್ಕಾರಕ್ಕೆ ಇರುವ ಬಗ್ಗೆ ಕಾಳಜಿ ಗೊತ್ತಾಗುತ್ತದೆ’ ಎಂದು ತಿಳಿಸಿದರು.
ಶಾಸಕ ಎಸ್.ಎ. ರವೀಂದ್ರನಾಥ್, ‘ಗಂಡುಮಕ್ಕಳು ಎಲ್ಲಾದರೂ ಉಳಿದುಕೊಂಡು ಓದಬಹುದು. ಹೆಣ್ಣುಮಕ್ಕಳಿಗೆ ಅದು ಕಷ್ಟ. ಆದ್ದರಿಂದ ಸಮಾಜ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಅಗತ್ಯವಾಗಿ ಬೇಕು. ಅರ್ಜಿ ಸಲ್ಲಿಸಿ ನಿವೇಶನ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.
ಮೇಯರ್ ಎಸ್.ಟಿ. ವೀರೇಶ್, ‘ಶಿಕ್ಷಣ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕೆಂಬುದೇ ಬಿಜೆಪಿ ಸರ್ಕಾರದ ಮುಖ್ಯ ಧ್ಯೇಯ. ಅದಕ್ಕೆ ನಾಯಕ ಸಮಾಜದ ಹಾಸ್ಟೆಲ್ಗೆ ಅನುದಾನ ನೀಡಿರುವುದೇ ನಿದರ್ಶನ’ ಎಂದರು.
ಆರಂಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡುವ ವೇಳೆ ಸಮಾಜದ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲು ನಾಯಕ ವಿದ್ಯಾರ್ಥಿ ನಿಲಯಕ್ಕೆ ಜಾಗ ನೀಡುವಂತೆ ಮನವಿ ಮಾಡಿದ್ದರು.
ನಾಯಕರ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ.ವೀರಣ್ಣ, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸಮಾಜದ ಮುಖಂಡರಾದ ಹದಡಿ ಹಾಲಪ್ಪ, ಆಂಜನೇಯ ಗುರೂಜಿ ಅವರೂ ಇದ್ದರು. ಅಣಜಿ ಅಂಜಿನಪ್ಪ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.