
ಹರಿಹರ: ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಸಡಗರ, ಶ್ರದ್ಧಾಭಕ್ತಿಯಿಂದ ನೇರವೇರಿತು.
ಬುಧವಾರ ರಾತ್ರಿ ಸ್ವಾಮಿಯ ಕಾರ್ತಿಕ ಮಹೋತ್ಸವದಿಂದ ಆರಂಭವಾದ ಜಾತ್ರಾ ಮಹೋತ್ಸವ ಶುಕ್ರವಾರ ಸಂಜೆ ನಡೆದ ಪಲ್ಲಕ್ಕಿ ಉತ್ಸವ, ರಸಮಂಜರಿ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಬುಧವಾರ ತುಂಗಭದ್ರಾ ನದಿಯ ತಟದಲ್ಲಿ ಮಹೇಶ್ವರ ಸ್ವಾಮಿಗೆ ವಿಶೇಷ ಪೂಜೆ ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಕಾರ್ಯಗಳು ನಡೆದು ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಗುರುವಾರ ಸಂಜೆ ಮಹೇಶ್ವರ ಸ್ವಾಮಿ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ಪಲ್ಲಕ್ಕಿ ಉತ್ಸವವು ಡೊಳ್ಳು, ಸಮಾಳ, ಪುರವಂತರು, ಬ್ಯಾಂಡ್ಸೆಟ್ ಮುಂತಾದ ಕಲಾ ಮೇಳಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ದಿಟೂರು ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಪೀಠದ ಚನ್ನಪ್ಪ ಸ್ವಾಮಿ ದೇವರ ಸಾನ್ನಿಧ್ಯದಲ್ಲಿ ಸಂಚರಿಸಿತು.
ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಭಕ್ತರು ತಮ್ಮ ಮನೆಯ ಮುಂದೆ ಉತ್ಸವ ಬರುತ್ತಿದ್ದಂತೆ ಹಣ್ಣು– ಕಾಯಿ ಮಾಡಿಸಿ ಭಕ್ತಿ ಸಮರ್ಪಿಸಿದರು. ಪ್ರಮುಖ ವೃತ್ತದಲ್ಲಿ ಬಾಣ ಬಿರಿಸಿನ ಸಿಡಿಮದ್ದಿನ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ, ಉಪಾಧ್ಯಕ್ಷ ವಿರೂಪಾಕ್ಷಪ್ಪ ಆನ್ವೇರಿ, ಸದಸ್ಯರಾದ ಎ.ಕೆ.ಚಂದ್ರಪ್ಪ, ಗ್ರಾಮದ ಮುಖಂಡರಾದ ಚಂದ್ರಶೇಖರಪ್ಪ ಪೂಜಾರ್, ಗೌಡ್ರು ಈಶಪ್ಪ, ಕಟ್ಟೆಪ್ಪರ ಚಂದ್ರಶೇಖರ್, ನಿರಂಜನ ದೀಟೂರು, ಟಿ.ರಾಜು, ಎಸ್ಡಿಎಂಸಿ ಅಧ್ಯಕ್ಷ ಡಿ.ಸಿ.ಮಹೇಶ್, ತಳವಾರ ರಾಜಪ್ಪ, ಡಿ.ಎಸ್.ರವಿ, ಎಲ್. ಮಹೇಶಪ್ಪ, ವಾಗೀಶ್ ಮೆಡಿಕಲ್ ಸೇರಿ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.