ಹರಿಹರ: ಒಳಮೀಸಲಾತಿ ವರ್ಗೀಕರಣದ ನಿಟ್ಟಿನಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಮುಖಂಡರು ಸೋಮವಾರ ಇಲ್ಲಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದರು.
ರಾಜ್ಯ ಪರಿಶಿಷ್ಟ ಜಾತಿಗಳ ಒಳಮಿಸಲಾತಿ ಜಾರಿ ಹೋರಾಟ ಸಮಿತಿಯ ಸೂಚನೆ ಮೇರೆಗೆ ಬಂದಿದ್ದಮುಖಂಡರು ಇಲ್ಲಿರುವ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿಗೆ ಪುಷ್ಪಾರ್ಪಣೆ ಮಾಡಿ ಕ್ರಾಂತಿ ಗೀತೆ ಹಾಡಿ ಪಾದಯಾತ್ರೆ ಆರಂಭಿಸಿದರು.
‘ಪ್ರತಿ ಚುನಾವಣೆ ಸಂದರ್ಭ ಒಳ ಮೀಸಲಾತಿ ಜಾರಿಯ ಸುಳ್ಳು ಭರವಸೆ ನೀಡುವ ರಾಜಕೀಯ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಪರಿಶಿಷ್ಟ ಜಾತಿಯವರ ಮತಗಳನ್ನು ಪಡೆಯುತ್ತ ಬಂದಿದ್ದಾರೆ. ಅಂಥವರನ್ನು ಇನ್ನು ಮುಂದೆ ನಂಬುವುದಿಲ್ಲ’ ಎಂದು ಪಾದಯಾತ್ರಿಗಳು ಹೇಳಿದರು.
‘ಡಿ. 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ದಲಿತರ ಹಕ್ಕನ್ನು ನೀಡದ ರಾಜಕೀಯ ಪಕ್ಷಗಳ ಬಣ್ಣ ಬಯಲು ಮಾಡಲಾಗುವುದು. ಬೇಡಿಕೆ ಈಡೇರಿಸದಿದ್ದರೆ ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ವೇಳೆ ಹೋರಾಟ ಮುಂದುವರಿಸಲಾಗುವುದು’ ಎಂದು ಎಚ್ಚರಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ
ಎಂ. ಗುರುಮೂರ್ತಿ, ರಾಜ್ಯ ಪರಿಶಿಷ್ಟ ಜಾತಿಗಳ ಒಳಮಿಸಲಾತಿ ಜಾರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್. ಮಾರೆಪ್ಪ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪ್ರೊ.ಸಿ.ಕೆ. ಮಹೇಶ್, ಎಚ್. ಮಲ್ಲೇಶ್, ಹೆಣ್ಣೂರು ಶ್ರೀನಿವಾಸ, ಅಂಬಣ್ಣ ಆರೋಲಿಕರ್, ಶಿವರಾಯ ಅಕ್ಕರಕಿ, ಕುಂದುವಾಡ ಮಂಜುನಾಥ, ಪಿ.ಜೆ. ಮಹಾಂತೇಶ್, ಹೆಗ್ಗೆರೆ ರಂಗಪ್ಪ, ಡಿ. ಹನುಮಂತಪ್ಪ, ಎಸ್. ಕೇಶವ, ಎಲ್. ನಿರಂಜನಮೂರ್ತಿ, ರಾಯಚೂರು ಹನುಮಂತಪ್ಪ ಕಕ್ಕರಗಲ್, ಬಿ.ಎನ್. ಗಂಗಾಧರ ಚಿಕ್ಕಬಳ್ಳಾಪುರ, ಮುಂಡಗೋಡು ಫಕೀರಪ್ಪ, ಎ.ಹನುಮಂತಪ್ಪ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.