ADVERTISEMENT

ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಒತ್ತಾಯ: ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:18 IST
Last Updated 11 ಫೆಬ್ರುವರಿ 2020, 10:18 IST

ದಾವಣಗೆರೆ: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂಬ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೆಂಗಳೂರಿನಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರ ಎಚ್‌.ಎಸ್‌. ಮಂಜುನಾಥ್‌ (ರಾಮಭಕ್ತ ಮಂಜುನಾಥ್‌) ಹೇಳಿದರು.

ಬೆಂಗಳೂರಿನ ಹೂಡಿ ಗ್ರಾಮದಿಂದ ಬಂದ ಪಾದಯಾತ್ರೆ ಸೋಮವಾರ ದಾವಣಗೆರೆ ತಲುಪಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 80 ರಷ್ಟು ಮೀಸಲಾತಿ ನೀಡಲೇಬೇಕು. ಶಾಂತಿಯುತ ಪ್ರತಿಭಟನೆ ಉದ್ದೇಶದಿಂದ ಬೆಳಗಾವಿಯವರೆಗೆ 520 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 36 ವರ್ಷಗಳಿಂದ ಯಾವುದೇ ಸರ್ಕಾರಗಳು ಬಂದರೂ ವರದಿ ಜಾರಿಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು.

ಪಾದಯಾತ್ರೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ಉಪಾಧ್ಯಕ್ಷ ಎಸ್‌. ದಿಲೀಪ್‌ಕುಮಾರ್‌, ಆಂಜಿ, ದಿನೇಶ್‌, ಮುನಿಕೃಷ್ಣ, ಲಿಂಗರಾಜು ಪಾಲ್ಗೊಂಡಿದ್ದಾರೆ. ಖಾಸಗಿ ಹಾಗೂ ಐಟಿಬಿಐ ಕಂಪನಿಗಳಲ್ಲಿ ಕನ್ನಡಿಗರಿಗೇ ಹೆಚ್ಚಿನ ಉದ್ಯೋಗ ನೀಡಬೇಕು. ಪಾದಯಾತ್ರೆ ಬೆಳಗಾವಿ ಸುವರ್ಣಸೌಧ ತಲುಪಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ADVERTISEMENT

ಪಾದಯಾತ್ರೆಗೆ ಬೆಂಬಲ ನೀಡುವವರು ಶುಲ್ಕರಹಿತ ನಂಬರ್‌ 9319464683ಗೆ ಮಿಸ್‌ ಕಾಲ್‌ ನೀಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌. ದಿಲೀಪ್‌ಕುಮಾರ್‌, ಕೆ.ಎಂ. ಲಿಂಗರಾಜು, ಗೀತಾ, ವೀಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.