
ಜಗಳೂರು: ಸಿಇಓ ನಡಿಗೆ ಮುಂಜಾನೆ ಗ್ರಾಮಗಳ ಕಡೆ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಅವರು ತಾಲ್ಲೂಕಿನ ಹಿರೇ ಮಲ್ಲನ ಹೋಳೆ, ದೋಣಿಹಳ್ಳಿ ಸೇರಿ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಶನಿವಾರ ಭೇಟಿ ನೀಡಿ, ಅಂಗನವಾಡಿ ಶಾಲಾ ಕಟ್ಟಡ, ಗ್ರಂಥಾಲಯ ಹಾಗೂ ಕಾಮಗಾರಿ ಪರಿಶೀಲಿಸಿದರು.
ದೊಣೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಗಾರಕ್ಕನ ಗುಡ್ಡ ಸಮೀಪ ಜಿ ರಾಮ್ ಜಿ ಯೋಜನೆಯಡಿ ಚೆಕ್ ಡ್ಯಾಂನಲ್ಲಿ ಹೂಳು ತೆಗೆಯುವ ಕಾಮಗಾರಿ ವೀಕ್ಷಿಸಿದರು.
ಕಾಮಗಾರಿಯಲ್ಲಿ 345 ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸಕಾಲಕ್ಕೆ ಇವರಿಗೆ ಕೂಲಿ ಹಣ ಪಾವತಿ ಮಾಡಲಾಗುತ್ತಿದೆ. ಗುರುವಾರ ಕಾಮಗಾರಿ ನಡೆಯುವ ಸ್ಥಳದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ . ಹಿರೇಮಲ್ಲನ ಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಾಪುರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 24 ಗಂಟೆಗಳು ಕಾರ್ಯನಿರ್ವಹಿಸುವಂತೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದರು.
‘ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಗ್ರಾಮೀಣ ಭಾಗದವರಿಗೆ ದಿನದ 24 ಗಂಟೆಗಳ ಕಾಲ ನೀರು ಒದಗಿಸುವುದೇ ನಮ್ಮ ಉದ್ದೇಶವಾಗಿದ್ದು, ಆ ಕೆಲಸವನ್ನು ಮಾಡಿಯೆ ತೀರುತ್ತೇವೆ’ ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯತಿ ಇ.ಓ. ಕೆಂಚಪ್ಪ , ಪಿಡಿಒ ಅರವಿಂದ್, ಕೊಟ್ರೇಶ್ , ಸಿಬ್ಬಂದಿ ಸಿದ್ದಿಕ್, ಅಪ್ತಸಹಾಯಕ ನವೀನ್, ಗನ್ ಮ್ಯಾನ್ ರಾಘವೇಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.