
ಮಾಯಕೊಂಡ: ‘ಕನ್ನಡ ಯುವ ಶಕ್ತಿ ಕೇಂದ್ರಗಳು ಎಷ್ಟು ಕ್ರಿಯಾಶೀಲವಾಗಿರುತ್ತವೋ ಅಲ್ಲಿವರೆಗೂ ನಮ್ಮ ಭಾಷೆ ಶಾಶ್ವತವಾಗಿರುತ್ತದೆ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಸೋಮವಾರ ಇಲ್ಲಿನ ಆಂಜನೇಯ ವೃತ್ತದಲ್ಲಿ ಕನ್ನಡ ಯುವ ಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಆದಿ ಕವಿ ಪಂಪ, ಕುಮಾರವ್ಯಾಸರ ಕಾವ್ಯ ಓದದಿದ್ದರೆ ಒಬ್ಬ ಪ್ರೈಮರಿ ಶಾಲಾ ಶಿಕ್ಷಕ ನಾಡೋಜವರೆಗೂ ಸಾಗುತ್ತಿರಲಿಲ್ಲ. ಇದು ಕನ್ನಡ ಭಾಷೆಯ ಶಕ್ತಿ. ಕನ್ನಡ ಪಡಸಾಲೆ ಭಾಷೆ ಆಗಬೇಕು. ಶಿಕ್ಷಕರು ಕೇವಲ ಸೆಮಿಸ್ಟರ್ ಪದ್ದತಿ ಬದಿಗಿರಿಸಿ ಕನ್ನಡದ ಮೇಲೆ ಪ್ರೀತಿ ಬೆಳೆಸಲು ಮುಂದಾಗಬೇಕು.
ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹಿಂದಿ ಯಾರು ಯಾವಾಗ ಬೇಕಾದರೂ ಕಲಿಯಬಹುದಾದ ಭಾಷೆ. ಎಲ್ಲರ ಮೇಲೂ ಹಿಂದಿ ಹೇರಿಕೆ ಸಲ್ಲದು. ಟಿವಿ, ಮೊಬೈಲ್ ಕನ್ನಡ ಭಾಷೆಯನ್ನು ನಾಶ ಮಾಡುತ್ತಿವೆ. ಮಕ್ಕಳಲ್ಲಿ ಪ್ರಶ್ನಿಸುವ ಶಕ್ತಿ ಕಸಿಯುತ್ತಿವೆ’ ಎಂದು ಹೇಳಿದರು.
‘ಅಂಕ ಗಳಿಕೆಗೆ ಒತ್ತಡ ಬೇಡ. ಇಂಗ್ಲಿಷ್ ಕಾನ್ವೆಂಟ್ಗಳಲ್ಲಿ ಕಲಿಸಿದ್ದರ ಪರಿಣಾಮ ರಾಜ್ಯದಲ್ಲಿ 28,000 ವೃದ್ಧಾಶ್ರಮಗಳಾಗಿವೆ.
ಇಲ್ಲಿನ ಧರ್ಮ ಸಹಿಷ್ಣತೆ, ನೈಸರ್ಗಿಕ ಸಂಪತ್ತು ಎಲ್ಲೂ ಇಲ್ಲ. ಗಂಗರು, ಕದಂಬರು ಶಿಲ್ಪಕಲೆಗೆ ಹೆಚ್ಚು ಒತ್ತು ನೀಡಿರುವುದು ನಮ್ಮ ಹೆಮ್ಮೆ’ ಎಂದರು.
ದೆಹಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ.ಎಂ.ಕೆ. ರಮೇಶ್ ಮಾತನಾಡಿ, ‘ಕನ್ನಡ ಸಾವಿರಾರು ವರ್ಷಗಳ ಇತಿಹಾಸವಿರುವ ಸಮೃದ್ಧ ಭಾಷೆ. ಮಾತೃ ಭಾಷೆ ಕನ್ನಡವನ್ನು ಚೆನ್ನಾಗಿ ಕಲಿಯೋಣ, ಚಿಕ್ಕಂದಿನಲ್ಲಿ ಮಾತೃ ಭಾಷೆಯನ್ನು ಕಲಿಯದವರಿಗೆ ಭವಿಷ್ಯವಿಲ್ಲ. ಪ್ರಸ್ತುತ ನೂರಾರು ಭಾಷೆಗಳು ಅಳಿವಿನ ಅಂಚಿಗೆ ಸರಿದಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಹುಟ್ಟೂರಿನ ಬಗ್ಗೆ ಅಭಿಮಾನ ಅಗತ್ಯ. ದೇಶ, ವಿದೇಶ ಸುತ್ತಿದ್ದರೂ ನಮ್ಮೂರಿನ ನೆನಪುಗಳೇ ಸಂತಸ. ನಾವು ನಮ್ಮತನ ಕಳೆದುಕೊಳ್ಳದೆ ಉಳಿಸಿಕೊಳ್ಳಬೇಕು. ಇದಕ್ಕಾಗಿ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ, ನಿರಂತರ ಬಳಕೆ ಅಗತ್ಯ’ ಎಂದು ಹೇಳಿದರು.
‘ಕನ್ನಡ ಉಳಿದಿರುವುದು ಗ್ರಾಮೀಣ ಭಾಗದ ದಾವಣಗೆರೆಯಲ್ಲಿ ಮಾತ್ರ. ನೆಲ, ಜಲ ಸಂರಕ್ಷಣೆಯ ಜವಾಬ್ದಾರಿ ಮುಂದಿನ ಪೀಳಿಗೆಯ ಕೈಯಲ್ಲಿದೆ.
ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುತ್ತೇನೆ. ನಿವೇಶನ ತೋರಿಸಿ ಮುಂದಿನ ವರ್ಷ ಆ ಭನವದಲ್ಲಿ ರಾಜ್ಯೋತ್ಸವ ಮಾಡಬೇಕು. ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕು, ಹೋಬಳಿ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪ್ರಯತ್ನಿಸುತ್ತೇನೆ’ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
‘ಕನ್ನಡ ನಾಡು, ನುಡಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಸಂಘಕ್ಕೆ ಶಾಸಕರು ಕನ್ನಡ ಭವನ ನಿರ್ಮಿಸಿ ಕೊಡಬೇಕು. ಮಾಯಕೊಂಡವನ್ನು ತಾಲ್ಲೂಕು ಕೇಂದ್ರ ಮಾಡಬೇಕು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ಲಿಂಗರಾಜು, ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಲ್ಲಿಕಾರ್ಜುನ್, ಸದಸ್ಯರಾದ ಲತಾ ಮಲ್ಲಿಕಾರ್ಜುನ್, ಪುಷ್ಪಾ ಉಮಾಶಂಕರ್, ನಾಗಮ್ಮ ಬೀರಪ್ಪ, ನಾಗಪ್ಪ, ಸುನಿತಾ ಹನುಮಂತಪ್ಪ, ಮಲ್ಲಿಕಾರ್ಜುನ್, ಮಂಜುನಾಥ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಲತೇಶ್, ಸಂಘದ ಅಧ್ಯಕ್ಷ ಮಂಜುನಾಥ ಎಸ್.ಎಂ, ಜಿ. ಜಗದೀಶ್, ಗುರುನಾಥ್, ಆರ್. ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಎಂ.ವಿ. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.