ಮಾಯಕೊಂಡ: ‘ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪಾತ್ರ ಬಹಳ ದೊಡ್ಡದು. ಆದ್ದರಿಂದ ಶಿಬಿರಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜಕ ಅಶೋಕ ಕುಮಾರ್ ವಿ. ಪಾಳೇದ್ ಸಲಹೆ ನೀಡಿದರು.
ಸಮೀಪದ ಅಣಬೇರು ಗ್ರಾಮದಲ್ಲಿ ಮಾಯಕೊಂಡದ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಯೋಜನೆಯಲ್ಲಿ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶಗಳಿವೆ. ಇಲ್ಲಿ ಸಮಯ ಪ್ರಜ್ಞೆ, ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣ ಕಲಿಯಬಹುದು. ಶಿಬಿರ ಕಾಲೇಜಿಗೆ ಮಾತ್ರ ಸೀಮಿತವಲ್ಲ. ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಶಿಬಿರಗಳಿಗೆ ಹೋಗುವ ಅವಕಾಶವೂ ಸಿಗಲಿದೆ. ದೇಶ ಕಟ್ಟುವ ಕೆಲಸಕ್ಕೆ ಯುವಜನರನ್ನು ಸಜ್ಜುಗೊಳಿಸುವ ಹೊಣೆಗಾರಿಕೆ ಶಿಕ್ಷಕರಿಗೂ ಇರಲಿ’ ಎಂದು ಹೇಳಿದರು.
ಪ್ರಾಚಾರ್ಯರಾದ ತ್ರಿವೇಣಿ, ರೈತ ಮುಖಂಡ ಅಣಬೇರು ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಣಬೇರು ಶಿವಮೂರ್ತಿ ಮಾತನಾಡಿದರು.
ಎನ್ಎಸ್ಎಸ್ ಸಂಯೋಜಕ ಸದಾಶಿವಪ್ಪ, ಅಣಬೇರು ಗ್ರಾಮ ಪಂಚಾಯಿತಿ ಅಧ್ಯಕ್ಷ ಓಂಕಾರಪ್ಪ, ಮಾಜಿ ಅಧ್ಯಕ್ಷ ಬುಡೇನ್ ಸಾಬ್, ಸದಸ್ಯರಾದ ಅನಿಲ್ ಕುಮಾರ್, ಮುಖಂಡರಾದ ರಾಜಣ್ಣ, ಶಿವಮೂರ್ತಿ, ವಾಗೀಶಪ್ಪ, ನಾಗೇದ್ರಪ್ಪ, ಗೋವಿಂದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.