ADVERTISEMENT

ದಾವಣಗೆರೆ | ಕಿರುಧಾನ್ಯ ಸೇವಿಸಿ: ರೋಗಗಳಿಂದ ದೂರವಿರಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:24 IST
Last Updated 21 ಜನವರಿ 2026, 2:24 IST
<div class="paragraphs"><p>ದಾವಣಗೆರೆಯಲ್ಲಿ ಕೃಷಿ ಇಲಾಖೆ ಮಂಗಳವಾರ ಆಯೋಜಿಸಿದ್ದ ‘ಸಿರಿಧಾನ್ಯ ನಡಿಗೆ, ಆರೋಗ್ಯದ ಕಡೆಗೆ’ ಜಾಥಾದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ್ ವಿಠ್ಠಲ ರಾವ್ ಹೆಜ್ಜೆ ಹಾಕಿದರು </p></div>

ದಾವಣಗೆರೆಯಲ್ಲಿ ಕೃಷಿ ಇಲಾಖೆ ಮಂಗಳವಾರ ಆಯೋಜಿಸಿದ್ದ ‘ಸಿರಿಧಾನ್ಯ ನಡಿಗೆ, ಆರೋಗ್ಯದ ಕಡೆಗೆ’ ಜಾಥಾದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ್ ವಿಠ್ಠಲ ರಾವ್ ಹೆಜ್ಜೆ ಹಾಕಿದರು

   

ಪ್ರಜಾವಾಣಿ ಚಿತ್ರ

ದಾವಣಗೆರೆ: ಸಿರಿಧಾನ್ಯಗಳ ಕುರಿತು ಅರಿವು ಮೂಡಿಸುವ ‘ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ’ ಜಾಗೃತಿ ಜಾಥಾ ನಗರದಲ್ಲಿ ಮಂಗಳವಾರ ನಡೆಯಿತು. ರೈತರಂತೆ ಪಾರಂಪರಿಕ‌ ಉಡಿಗೆ ತೊಟ್ಟು ಹೆಜ್ಜೆ ಹಾಕಿದ ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಜನರ ಗಮನ ಸೆಳೆದರು.

ADVERTISEMENT

ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಪೌಷ್ಟಿಕ ಆಹಾರ ಅಭಿಯಾನದ ಅಂಗವಾಗಿ ಕೃಷಿ ಇಲಾಖೆ ಈ‌ ಕಾರ್ಯಕ್ರಮ ಹಮ್ಮಿಕೊಂಡಿತ್ತು. ‘ಬರದ ಭಯಕ್ಕೆ ಸಿರಿಧಾನ್ಯ ಅಭಯ’, ‘ಜೋಳ ತಿಂದವನು ಆಗುವನು ಗೂಳಿಯಂತೆ‌ ಬಲಿಷ್ಠ’, ‘ಸಿರಿಧಾನ್ಯ ತಿನ್ನಿರಿ ಆರೋಗ್ಯ ಕಾಪಾಡಿಕೊಳ್ಳಿ’ ಎಂಬ ಭಿತ್ತಿಚಿತ್ರಗಳನ್ನು ಹಿಡಿದು ಹೆಜ್ಜೆ ಹಾಕಿದರು.

ಪುರುಷರು ಪಂಚೆ ಹಾಗೂ ಶಲ್ಯ ಧರಿಸಿ ರೈತರಂತೆ ಕಾಣುತ್ತಿದ್ದರು. ಮಹಿಳೆಯರು ಸೀರೆಯುಟ್ಟು ಸಾಗಿದರು. ಡೊಳ್ಳ ಕುಣಿತ ಸೇರಿದಂತೆ ಕಲಾ ತಂಡಗಳು ನಡಿಗೆಯನ್ನು ಇನ್ನಷ್ಟು ಆಕರ್ಷಕಗೊಳಿಸಿದ್ದವು. ಸಿರಿಧಾನ್ಯಗಳ ಮಹತ್ವ ಸಾರುವ ಘೋಷಣೆಗಳು ಮೊಳಗಿದವು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಅವರು ನಗರದ ಗುಂಡಿ ಮಹದೇವಪ್ಪ ವೃತ್ತದಲ್ಲಿ ನಡಿಗೆಗೆ ಚಾಲನೆ‌ ನೀಡಿದರು.‌ ಇಲ್ಲಿಂದ ಆರಂಭವಾದ ನಡಿಗೆ ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್‌ ಮಿಲ್‌, ಕುಂದುವಾಡ ಕೆರೆ ರಸ್ತೆ, ಗಂಗೂಬಾಯಿ ಹಾನಗಲ್ ಉದ್ಯಾನದ ಮೂಲಕ ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತದಲ್ಲಿ ಅಂತ್ಯವಾಯಿತು. ‌ಮನವ ಸರಪಳಿ ನಿರ್ಮಿಸಿ ಕಿರುಧಾನ್ಯ ಬಳಕೆ ಮಾಡುವಂತೆ ಜನರಿಗೆ ತಿಳಿಹೇಳಲಾಯಿತು.

‘ಹೈಬ್ರೀಡ್ ಧಾನ್ಯಗಳ ಆಹಾರ ಕಡಿಮೆ ಮಾಡಿ ಪಾರಂಪರಿಕವಾಗಿ ಬಂದಿರುವ ಸಿರಿಧಾನ್ಯ ಆಹಾರ ಪದ್ಧತಿ ರೂಢಿಸಿಕೊಂಡರೆ‌ ಆರೋಗ್ಯ ಚೆನ್ನಾಗಿರುತ್ತದೆ. ಬದಲಾದ ಜೀವನ ಶೈಲಿಯಿಂದ ಅಂಟುತ್ತಿರುವ ಕಾಯಿಲೆಗಳನ್ನು ದೂರವಿಡಬಹುದು. ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಅಭಿಪ್ರಾಯಪಟ್ಟರು.

‘ಸಿರಿಧಾನ್ಯ ಬಡವರ ಆಹಾರ ಎಂಬ ಕೀಳರಿಮೆ ಹಿಂದಿತ್ತು. ಈಗ ಕಾಲ ಬದಲಾಗಿದ್ದು, ಇದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ಈ ಧಾನ್ಯದಿಂದ ರೈತರ ಬದುಕು ಕೂಡ ಹಸನವಾಗಲಿದೆ. ಭತ್ತ, ಮೆಕ್ಕೆಜೋಳ ಸೇರಿದಂತೆ ಇತರ ಬೆಳೆಗಳಿಗೆ ಬೇಕಾಗುವಷ್ಟು ನೀರು ಸಿರಿಧಾನ್ಯಗಳಿಗೆ ಬೇಡ. ಇದರಿಂದ ನೀರಿನ ಸಂರಕ್ಷಣೆ ಆಗಲಿದೆ. ಹೀಗಾಗಿ ಸಿರಿಧಾನ್ಯ ಬಳಕೆ ಇನ್ನೂ ಹೆಚ್ಚಾಗಬೇಕು’ ಎಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ದೇವರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.