
ಬಸವಾಪಟ್ಟಣ: ಬಾಲ್ಯದಿಂದಲೇ ಆಧ್ಯಾತ್ಮಿಕ ಅನುಭವಗಳನ್ನು ಪಡೆಯುತ್ತಾ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡುತ್ತಿರುವ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಸ್ವಾಮೀಜಿ ಅವರು ಈ ಭಾಗದಲ್ಲಿ ಜನಪ್ರಿಯರಾಗಿದ್ದಾರೆ.
ಕೆಂಗಾಪುರದಂತಹ ಚಿಕ್ಕ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ರಾಮಪ್ಪ ಅವರು ಹರನಹಳ್ಳಿಯಲ್ಲಿ ಒಂದು ಶತಮಾನದ ಹಿಂದೆ ಜೀವಿಸಿದ್ದ ಬ್ರಹ್ಮಲಿಂಗೇಶ್ವರ ಸ್ವಾಮೀಜಿ ಅವರ ಪ್ರೇರಣೆ ಪಡೆದು ರಾಮಲಿಂಗೇಶ್ವರ ಸ್ವಾಮೀಜಿ ಎಂದು ಹೆಸರಾದರು. 50 ವರ್ಷಗಳ ಹಿಂದೆ ಹರನಹಳ್ಳಿಯಲ್ಲಿ ರಾಮಲಿಂಗೇಶ್ವರ ಮಠ ಸ್ಥಾಪಿಸಿ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿದ್ದಾರೆ.
ಶಿಕ್ಷಣದಿಂದಲೇ ಜನರ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತ ರಾಮಲಿಂಗೇಶ್ವರ ಶ್ರೀ, ಹರನಹಳ್ಳಿಯಲ್ಲಿ ರಾಮಲಿಂಗೇಶ್ವರ ವಿದ್ಯಾಪೀಠ ಸ್ಥಾಪಿಸಿ ಸುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗಿದ್ದಾರೆ. ಈ ವಿದ್ಯಾಸಂಸ್ಥೆಯಲ್ಲಿ ಎಲ್.ಕೆ.ಜಿ.ಯಿಂದ ಎಸ್ಎಸ್ಎಲ್ಸಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಪದವಿಪೂರ್ವ ಕಾಲೇಜಿನಲ್ಲಿ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು, ಉರ್ದು ಮಾಧ್ಯಮದಲ್ಲಿಯೂ ಬೋಧನೆ ಮಾಡಲಾಗುತ್ತಿದೆ.
ವೃತ್ತಿಪರ ಶಿಕ್ಷಣಗಳಾದ ಐ.ಟಿ.ಐ.ಮತ್ತು ಬಿ.ಇಡಿ ಕೋರ್ಸ್ಗಳೂ ಇಲ್ಲಿವೆ. ಅಲ್ಲದೇ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಮತ್ತು ಭದ್ರಾವತಿ ತಾಲ್ಲೂಕು ನಿಂಬೆಗೊಂದಿ ಗ್ರಾಮಗಳಲ್ಲಿಯೂ ಪ್ರೌಢಶಾಲೆಗಳನ್ನು ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಿದ್ದಾರೆ.
ವಿದ್ಯಾಸಂಸ್ಥೆಯಲ್ಲಿ ಅಂದಾಜು 1,600 ವಿದ್ಯಾರ್ಥಿಗಳು, 78 ಅಧ್ಯಾಪಕ, ಉಪನ್ಯಾಸಕ ಮತ್ತು ಇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರನಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದಾರೆ. ಇಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದು, ಹೆಣ್ಣುಮಕ್ಕಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಆರ್.ವಿಜಯಕುಮಾರ್ ತಿಳಿಸಿದ್ದಾರೆ.
ಉಚಿತ ಸಾಮೂಹಿಕ ವಿವಾಹ
ರಾಮಲಿಂಗೇಶ್ವರ ಮಠದ ವತಿಯಿಂದ ಶಿವರಾತ್ರಿಯ ಮಾರನೇ ದಿನ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. 50 ವರ್ಷಗಳಿಂದ ಇದನ್ನು ಉಚಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ವಧು–ವರರಿಗೆ ಉಚಿತವಾಗಿ ಮಾಂಗಲ್ಯ ಬಟ್ಟೆ ನೀಡಲಾಗುತ್ತಿದೆ. ಈ ವಿವಾಹ ಕಾರ್ಯಕ್ರಮದ ಮೂಲಕ ಆಡಂಬರದ ಮದುವೆಗಳಿಗೆ ಸ್ವಾಮೀಜಿ ಕಡಿವಾಣ ಹಾಕಿದ್ದಾರೆ. ಬಡ ಕುಟುಂಬಗಳಿಗೆ ಇದರಿಂದ ಸಹಾಯವಾಗುತ್ತಿದ್ದು ಮಠಾಧೀಶರ ಆಶೀರ್ವಾದ ಅವರ ಸಮ್ಮುಖದಲ್ಲಿ ಮದುವೆಯಾದ ನೆಮ್ಮದಿಯೂ ವಧು– ವರರಿಗೆ ಸದಾ ಇರುತ್ತದೆ. ವರ್ಷದ 365 ದಿನಗಳೂ ರಾಮಲಿಂಗೇಶ್ವರ ಮಠದಲ್ಲಿ ಅನ್ನ ದಾಸೋಹ ನಡೆಸಲಾಗುತ್ತಿದೆ. ಇದರಿಂದ ನೂರಾರು ಬಡಕುಟುಂಬಗಳಿಗೆ ಮಠ ಆಸರೆಯಾಗಿದೆ ಎನ್ನುತ್ತಾರೆ ಕಣಿವೆಬಿಳಚಿಯ ಜಿಲ್ಲಾ ಮರಾಠ ಕ್ಷತ್ರಿಯ ಸಮಾಜದ ಉಪಾಧ್ಯಕ್ಷ ಎಸ್.ಅಣ್ಣೋಜಿರಾವ್. ಸೋಮವಾರ ಮುಳ್ಳುಗದ್ದುಗೆ ಉತ್ಸವದ ನಂತರ ನಡೆಯುವ ಧರ್ಮಸಭೆಯಲ್ಲಿ ಉಚಿತ ಸಾಮೂಹಿಕ ವಿವಾಗಳು ನಡೆಯುತ್ತವೆ ಎಂದು ಗ್ರಾಮದ ಮುಖಂಡ ಕೆ.ಪಿ.ಓಂಕಾರನಾಯ್ಕ ಹೇಳಿದರು.
ಮುಳ್ಳುಗದ್ದುಗೆ ಉತ್ಸವ
ಕಾರ್ಣಿಕ ಫೆಬ್ರುವರಿ 16 ರಂದು ಮುಂಜಾನೆ 6ಕ್ಕೆ ರಾಮಲಿಂಗೇಶ್ವರಸ್ವಾಮಿ ಹೊರಮಠದಿಂದ ಆರಂಭವಾಗುವ ರಾಮಲಿಂಗೇಶ್ವರ ಶ್ರೀಗಳ ಮುಳ್ಳುಗದ್ದುಗೆ ಉತ್ಸವವನ್ನು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಉದ್ಘಾಟಿಸಲಿದ್ದಾರೆ. ವಿವಿಧ ಜಾನಪದ ಮೇಳಗಳೊಂದಿಗೆ 1 ಕಿ.ಮೀ.ದೂರದ ಕೆಂಗಾಪುರದ ಒಳಮಠಕ್ಕೆ ಉತ್ಸವ ಆಗಮಿಸಲಿದ್ದು ನಂತರ ಸ್ವಾಮೀಜಿ ಕಾರ್ಣಿಕ ನುಡಿಯಲಿದ್ದಾರೆ.
ಶ್ರೀಗಳ ಪ್ರಗತಿಪರ ಚಿಂತನೆ
ಸಮಾಜದಲ್ಲಿರುವ ಮೂಢ ನಂಬಿಕೆಗಳನ್ನು ಹೋಗಲಾಡಿಸಿ ಅವರಲ್ಲಿ ವೈಚಾರಿಕ ಜಾಗೃತಿ ಮೂಡಿಸಲು ಸ್ವಾಮೀಜಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಪ್ರತಿವರ್ಷ ನಾಗರಪಂಚಮಿಯಂದು ನಾಗರ ಕಲ್ಲಿಗೆ ಹಾಲೆರೆಯದೇ ಅದನ್ನು ಶಾಲೆಯ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಸ್ವತಃ ಕುಡಿಸಿ ಪ್ರಗತಿಪರ ಚಿಂತನೆಯ ಹರಿಕಾರರಾಗಿದ್ದಾರೆ ಎಂದು ಗ್ರಾಮದ ಕೆ.ತಿಪ್ಪೇಶಪ್ಪ ಹೇಳಿದ್ದಾರೆ.
ರಾಮಲಿಂಗೇಶ್ವರ ಸ್ವಾಮೀಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.