
ಹರಿಹರ: ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆದ್ಯತೆ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಲಾಭ ದೊರಕಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು ಎಂದರು.
ತಾಲ್ಲೂಕಿನಲ್ಲಿ 124 ನ್ಯಾಯಬೆಲೆ ಅಂಗಡಿಗಳಿದ್ದು, ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ಸೇರಿ ಒಟ್ಟು 58,622 ಪಡಿತರ ಚೀಟಿಗಳಿವೆ ಎಂದು ಆಹಾರ ಇಲಾಖೆಯ ಶಿರಸ್ತೇದಾರ್ ಮಂಜುನಾಥ್ ಮಾಹಿತಿ ನೀಡಿದರು.
ಅಕ್ರಮ ಅಕ್ಕಿ ಹಾಗೂ ರಾಗಿ ಮಾರಾಟ ಕುರಿತಂತೆ 9 ದೂರು ದಾಖಲಾಗಿದ್ದು 178 ಚೀಲಗಳನ್ನು ವಶಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅವರು 2023-24ರ ಸಾಲಿನಲ್ಲಿ ಹೊಸ ಪಡಿತರ ಚೀಟಿಗಾಗಿ ಬಂದ 280 ಆರ್ಜಿಗಳ ಪೈಕಿ 21 ಅರ್ಜಿ ವಿಲೇವಾರಿಗೆ ಬಾಕಿಯಿವೆ ಎಂದರು.
ಎಪಿಎಂಸಿಯಲ್ಲಿರುವ ಆಹಾರ ಇಲಾಖೆಯ ಉಗ್ರಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸದಸ್ಯರು ಒತ್ತಾಯಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನಲ್ಲಿ ಈವೆರೆಗೆ 27 ಕಂತುಗಳಲ್ಲಿ 56,136 ಮಹಿಳೆಯರಿಗೆ ₹286.63 ಕೋಟಿ ನೀಡಲಾಗಿದೆ ಎಂದು ಸಿಡಿಪಿಒ ಪ್ರಿಯದರ್ಶಿನಿ ಮಾಹಿತಿ ನೀಡಿದರು.
ನಗರದ ದೂರವಾಣಿ ಸಂಪರ್ಕ ಕೇಂದ್ರದ ಬಳಿ ಕೆಎಸ್ಅರ್ಟಿಸಿ ಬಸ್ ನಿಲುಗಡೆ ಮಾಡುವಂತೆ ಸದಸ್ಯರಾದ ಸಂತೋಷ್ ನೋಟದವರ್ ಹಾಗೂ ಸಚಿನ್ ಕೊಂಡಜ್ಜಿ ಸಭೆಯಲ್ಲಿ ಆಗ್ರಹಿಸಿದರು.
ಸಾರ್ವಜನಿಕರೂ ಈ ಬಗ್ಗೆ ದೂರು ನೀಡಿದ್ದು, ಕೂಡಲೇ ಈ ಬಗ್ಗೆ ಕ್ರಮ ಜರುಗಿಸುವಂತೆ ಡಿಪೊ ಮ್ಯಾನೇಜರ್ ಮಹೇಶ್ವರಪ್ಪ ಅವರಿಗೆ ನಂದಿಗಾವಿ ಶ್ರೀನಿವಾಸ್ ಸೂಚಿಸಿದರು.
ಬೆಸ್ಕಾಂ ಎಇಇ ಲಕ್ಷಣ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು. ಸಮಿತಿಯ ಸದಸ್ಯರಾದ ಪಕ್ಕೀರೇಶ್, ಸವಿತಾ ನಾಯ್ಕ್, ವಿಶ್ವನಾಥ್, ಚಂದ್ರಪ್ಪ, ಗಿರೀಶ್, ಹಬೀಬ್ ಉಲ್ಲಾ, ಬ್ರೂಹಾನ್, ಜಿ.ಎನ್.ಕೃಷ್ಣಪ್ಪ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.