ADVERTISEMENT

ನಾನು ಬೆಳೆಯಲು ಪತ್ರಿಕೆಗಳು ಕಾರಣ; ಶಾಸಕ ರೇಣುಕಾಚಾರ್ಯ

ವಿಶೇಷ ಕೊರೊನಾ ವಾರಿಯರ್‌ ಪ್ರಶಸ್ತಿ ಸ್ವೀಕರಿಸಿದ ಶಾಸಕ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 1:58 IST
Last Updated 17 ಆಗಸ್ಟ್ 2021, 1:58 IST
ಹೊನ್ನಾಳಿ ಪುರಸಭಾ ಸಭಾಂಗಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ವಿಶೇಷ ಕೊರೊನಾ ವಾರಿಯರ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಹೊನ್ನಾಳಿ ಪುರಸಭಾ ಸಭಾಂಗಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ವಿಶೇಷ ಕೊರೊನಾ ವಾರಿಯರ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.   

ಹೊನ್ನಾಳಿ: ‘ನಾನು ಶಾಸಕನಾಗಿ, ಮಂತ್ರಿಯಾಗಿ ಬೆಳೆಯಲು ಪತ್ರಿಕೆಗಳೇ ಕಾರಣ. ಸ್ಥಳೀಯ ಪತ್ರಕರ್ತರು ಆರಂಭದಲ್ಲಿ ನನ್ನ ಕೆಲಸಗಳನ್ನು ಕುರಿತು ಬರೆದರು. ಟೀಕಿಸಿದರು. ತಪ್ಪುಗಳನ್ನು ಎತ್ತಿ ತೋರಿಸಿದರು. ತಿದ್ದಿ ತೀಡಿದರು’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಕೊರೊನಾ ವಾರಿಯರ್‌ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ಹೆಚ್ಚು ಓದಲಿಲ್ಲ. ರಾಜಕೀಯ ಕ್ಷೇತ್ರದಲ್ಲಿ ನನಗೆ ಯಾವ ಅನುಭವವೂ ಇಲ್ಲ. ಭಂಡ ಧೈರ್ಯ ಮಾಡಿ ತಾಲ್ಲೂಕಿನಾದ್ಯಂತ ಓಡಾಡಿ ಸಂಘಟನೆ ಮಾಡಿದೆ. ಚುನಾವಣೆಯಲ್ಲಿ ಗೆದ್ದು ಶಾಸಕನಾದೆ. ಕೆಲವರು ನಾನು ಮದವೇರಿದ ಆನೆ ಎನ್ನುತ್ತಾರೆ. ಆದರೆ, ನಾನು ಪಳಗಿದ ಆನೆ. ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿತಿದ್ದೇನೆ’ ಎಂದು ಹೇಳಿದರು.

ADVERTISEMENT

‘ನನಗೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಗ್ಗೆ ನೋವಿದೆ. ಆದರೆ, ಹೈಕಮಾಂಡ್ ತೀರ್ಮಾನ ಪ್ರಶ್ನಿಸುವಂತಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದಾಗ ನನಗೂ ಸಚಿವ ಸ್ಥಾನ ಸಿಗಬಹುದು ಎಂದುಕೊಂಡಿದ್ದೆ. ಸಿಗದಿದ್ದಾಗ ನೋವಾಗಿದ್ದು ನಿಜ. ಹಾಗಂತ ಮಂತ್ರಿಗಿರಿಗಾಗಿ ಲಾಬಿ ಮಾಡಲಿಲ್ಲ. ನನಗೆ ಅಧಿಕಾರದ ಮೇಲೆ ಆಸೆ ಇಲ್ಲ. ನನ್ನ ಕೆಲಸ ಕಾರ್ಯಗಳನ್ನು ತಾಲ್ಲೂಕಿನ ಜನರು ಮೆಚ್ಚಿದ್ದಾರೆ. ನನ್ನ ಸೇವೆಯನ್ನು ಪರಿಗಣಿಸಿ ಪತ್ರಕರ್ತರ ಸಂಘವು ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದು ಭಾವುಕರಾಗಿ ಹೇಳಿದರು.

ತಹಶೀಲ್ದಾರ್ ಬಸವನಗೌಡ ಕೋಟೂರ, ಪಿಎಸ್‍ಐ ಬಸವನಗೌಡ ಬಿರಾದರ್, ಪುರಸಭೆ ಅಧ್ಯಕ್ಷ ಕೆ.ವಿ. ಶ್ರೀಧರ್ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ. ನಾಗರಾಜ್ ಉಪನ್ಯಾಸ ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮೃತ್ಯುಂಜಯ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ಟಿ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಕೆ.ಎಸ್. ಯೋಗೀಶ್ ಸ್ವಾಗತಿಸಿದರು. ಚಿನ್ಮಯ್ ಪಾಟೀಲ್ ಪ್ರಾರ್ಥಿಸಿದರು. ಗಾಯಕಿ ಎಂ.ಎ. ಸ್ಪಂದನಾ ಹಾಡಿದರು. ಪತ್ರಕರ್ತರಾದ ಚನ್ನೇಶ್ ಇದಿರುಮನೆ ವಂದನೆ ಸಲ್ಲಿಸಿದರು. ಪತ್ರಕರ್ತ ಎನ್.ಕೆ. ಆಂಜನೇಯ ಅವರು ಪ್ರಶಸ್ತಿ ಪ್ರದಾನದ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಪತ್ರಕರ್ತರಾದ ಎಚ್.ಕೆ. ಮಲ್ಲೇಶ್, ಯು.ಬಿ. ಜಯಪ್ಪ, ಹರೀಶ್ ಸಾಗೋನಿ, ನ್ಯಾಮತಿ ಸದಾಶಿವಯ್ಯ, ಫಲವನಹಳ್ಳಿ ಹಳದಪ್ಪ, ಕತ್ತಿಗೆ ರುದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.