ನ್ಯಾಮತಿ: ‘ಸರ್ವ ಋತುವಿನಲ್ಲಿಯೂ ಸೂರ್ಯೋದಯಕ್ಕೂ ಪತ್ರಿಕೆಗಳನ್ನು ಮನೆ, ಕಚೇರಿಗೆ ತೆರಳಿ ಹಂಚುವ ಮೂಲಕ ಸಮಾಜದ ಪ್ರಸ್ತುತ ವಿಷಯಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ದೊಡ್ಡದಿದೆ’ ಎಂದು ತಹಶೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕ, ಕರ್ನಾಟಕ ರಾಜ್ಯ ಪತ್ರಿಕಾ ವಿತಕರ ಒಕ್ಕೂಟ ಗುರುವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಇಂದಿನ ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿಯೂ ಸಮಾಜದ ಸ್ವಾಸ್ಥ್ಯಕ್ಕೆ ಬೇಕಾದ ವಿಷಯಗಳನ್ನು ಹೆಕ್ಕಿ ತೆಗೆದು ಮುದ್ರಿಸುವ ಮೂಲಕ ಇಂದಿಗೂ ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ’ ಎಂದರು.
‘ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಓದಿನ ಜೊತೆಗೆ ಸಮಾಜದ ಪ್ರಸ್ತುತ ವಿಷಯದ ಕುರಿತು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ವಿಷಯವನ್ನು ಓದಿದರೆ ಮುಂದಿನ ತಮ್ಮ ಶೈಕ್ಷಣಿಕ ಜ್ಞಾನಾರ್ಜನೆ ಹೆಚ್ಚುವುದು’ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ವಿತರಕರ ಸಭೆ ಕರೆದು ನೂತನ ಸಂಘ ರಚಿಸುವ ಬಗ್ಗೆ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಎಂ.ಎಸ್.ಶಾಸ್ತ್ರೀ ಹೊಳೆಮಠ ಚರ್ಚಿಸೋಣ ಎಂದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತಕರ ಒಕ್ಕೂಟದ ಗೌರವಾಧ್ಯಕ್ಷ ಸದಾಶಿವಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕೆಗಳ ಪ್ರತಿನಿಧಿಗಳಾದ ಫಲವನಹಳ್ಳಿ ಜೆ.ಹಳದಪ್ಪ, ಸತೀಶ ಹಿರೇಮಠ, ಎನ್.ಜಿ. ವಿನಾಯಕ, ಬಿ.ಇ. ಷಣ್ಮುಖ, ವಿಶಾಲಾ ಷಣ್ಮುಖ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.