ADVERTISEMENT

ಹರಿಹರ | ಮೀಸಲಾತಿ ರಾಜಕೀಯ ಪಕ್ಷಗಳ ಕೊಡುಗೆಯಲ್ಲ: ವಾದಿರಾಜ್

ವಾಲ್ಮೀಕಿ ಜಾತ್ರೆಯಲ್ಲಿ ಬೆಂಗಳೂರಿನ ಸಾಮರಸ್ಯ ವೇದಿಕೆಯ ವಾದಿರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 4:55 IST
Last Updated 9 ಫೆಬ್ರುವರಿ 2026, 4:55 IST
ಕಾನೂನು ಗೋಷ್ಠಿಯನ್ನು ಎಸ್.ಎಸ್.ಪಾಟೀಲ್ ಉದ್ಘಾಟಿಸಿದರು
ಕಾನೂನು ಗೋಷ್ಠಿಯನ್ನು ಎಸ್.ಎಸ್.ಪಾಟೀಲ್ ಉದ್ಘಾಟಿಸಿದರು   

ಹರಿಹರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ನೀಡುತ್ತಿರುವ ಮೀಸಲಾತಿ ಸಂವಿಧಾನ ನಿರ್ದೇಶಿತವಾಗಿದೆಯೇ ಹೊರತು ಯಾವುದೇ  ರಾಜಕೀಯ ಪಕ್ಷದ ಕೊಡುಗೆಯಲ್ಲ ಎಂದು ಬೆಂಗಳೂರಿನ ಸಾಮರಸ್ಯ ವೇದಿಕೆಯ ವಾದಿರಾಜ್ ಹೇಳಿದರು.

ಎಸ್.ಸಿ., ಎಸ್.ಟಿ. ಸಮುದಾಯದವರಿಗೆ ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಬೇಕೆಂದು ಸಂವಿಧಾನವೇ ಹೇಳಿದೆ. ಸಂವಿಧಾನದ ಆಶಯದಂತೆ ಈ ಸಮುದಾಯದವರಿಗೆ ಮೀಸಲಾತಿ ದೊರೆಯುತ್ತಿದೆ ಎಂದು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಕಾನೂನು ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.

ಸಾಮಾಜಿಕ ನ್ಯಾಯದ ಹರಿಕಾರರೆಮದು ಗುರುತಿಸ್ಪಡುವ ಎಲ್.ಜಿ.ಹಾವನೂರು ಹಾಗೂ ಆಗಿನ ಸಿ.ಎಂ. ದೇವರಾಜು ಅರಸು ಅವರ ಜೋಡಿಯು 1974ರಲ್ಲೆ ರಾಜ್ಯದಲ್ಲಿ ಹಾವನೂರು ವರದಿ ಅನ್ವಯ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಿ ದೇಶಕ್ಕೆ ಮಾದರಿಯಾಗಿದ್ದಾರೆ. 1990ರಲ್ಲಿ ಆಗಿನ ಪ್ರಧಾನಿ ವಿ.ಪಿ.ಸಿಂಗ್ ಅವರು ಮಂಡಲ್ ವರದಿ ಜಾರಿ ಮಾಡುವ ಮೂಲಕ ದೇಶದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಿದರು ಎಂದರು.

ADVERTISEMENT

ಪ್ರಸನ್ನಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ ಎಸ್.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ವಕೀಲ ಸಣ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈಕೋರ್ಟಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎನ್.ವೈ.ವಿಜಯಕುಮಾರ್, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಜಿ.ಟಿ.ಚಂದ್ರಶೇಖರಪ್ಪ ಮಾರೆಪ್ಪ ನಾಯಕ ಹಾಗೂ ಸಮುದಾಯದ ವಕೀಲರು ಇದ್ದರು.

ವಾಲ್ಮೀಕಿ ಜಾತ್ರೆ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇದು ಇಡೀ ನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕವಾಗಿದೆ. ಇಡೀ ಸಮಾಜಕ್ಕೆ ನ್ಯಾಯ ಸಿಗಲಿ

-ಬಿ.ವೈ.ರಾಘವೇಂದ್ರ ಸಂಸದ 

ಹಿಂದೆ ಉದ್ಯೋಗದ ಆಧಾರದಲ್ಲಿ ವರ್ಣಾಶ್ರಮ ಪದ್ಧತಿ ಇತ್ತು. ಬ್ರಹ್ಮಜ್ಞಾನ ಪಡೆದವನು ಬ್ರಾಹ್ಮಣನಾಗುತ್ತಿದ್ದ ಎಂಬುದಕ್ಕೆ ರಾಮಾಯಣ ರಚಿಸಿದ ವಾಲ್ಮೀಕಿ ಮಹಾಭಾರತ ಬರೆದ ವ್ಯಾಸ ಮಹರ್ಷಿಗಳೇ ಸಾಕ್ಷಿ 

-ಟಿ.ಸಿ.ರವಿ ವಿಧಾನ ಪರಿಷತ್ ಸದಸ್ಯ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.