ದಾವಣಗೆರೆ: ಇಂದಿನ ಆಧುನಿಕ ಜಗತ್ತಿನಲ್ಲಿ ಶಿವಯೋಗ ರೋಗ ನಿವಾರಕವಾಗಿ ಕೆಲಸ ಮಾಡುತ್ತದೆ ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಜಯದೇವ ಮುರುಘರಾಜೇಂದ್ರ ಸ್ವಾಮೀಜಿಗಳ 63ನೇ ಸ್ಮರಣೋತ್ಸವದ ಪ್ರಯುಕ್ತ ಶರಣ ಶಿವಯೋಗ ಮತ್ತು ಶರಣ ಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಹಲವು ಅಪಾಯಕಾರಿ ರೋಗಗಳು ನಮ್ಮನ್ನು ಕಾಡುತ್ತಿವೆ. ಅವುಗಳಲ್ಲಿ ಅಧಿಕ ರಕ್ತದೊತ್ತಡ ಮಹಾಮಾರಿಯಾಗಿದೆ. ಭಾರತೀಯರು ಯಾಂತ್ರಿಕ, ಕೃತಕ ಹಾಗೂ ನಾಟಕೀಯ ಜೀವನ ನಡೆಸುತ್ತಿದ್ದಾರೆ. ಇಂತಹ ಸಿನಿಕತನ ಜೀವನವನ್ನು ಸಹಜ ಶಿವಯೋಗ ತೊಲಗಿಸುತ್ತದೆ ಎಂದರು.
ಅಧಿಕ ರಕ್ತದೊತ್ತಡದಿಂದ ಹೃದಯಾಘಾತ, ಕಿಡ್ನಿ, ಮೂತ್ರಕೋಶ ಹಾಗೂ ಮಿದುಳಿಗೆ ಸಂಬಂಧಿಸಿದ ರೋಗಗಳು ಬರುತ್ತವೆ. ಸಿಹಿ, ಉಪ್ಪು ಹಾಗೂ ಆಲ್ಕೊಹಾಲ್, ತಂಬಾಕುಗಳ ಅತಿಯಾದ ಸೇವನೆಯಿಂದ ಅಧಿಕ ರಕ್ತದೊತ್ತಡ ಹೆಚ್ಚುತ್ತಾ ಹೋಗುತ್ತಾ ಹೋಗುತ್ತದೆ. ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವುದರಿಂದ ರೋಗಗಳನ್ನು ದೂರವಿಡಬಹುದು ಎಂದು ಸಲಹೆ ನೀಡಿದರು.
ಇಂದು ಹೆಚ್ಚಿನ ಜನರು ಅತಿಯಾಗಿ ತಿಂದು ಟಿವಿಯ ಮುಂದೆ ಕುಳಿತುಕೊಳ್ಳುತ್ತಾರೆ. ತಿಂದಿದ್ದನ್ನು ಜೀರ್ಣಿಸಿಕೊಳ್ಳುವ ಆಲೋಚನೆ ಮಾಡುತ್ತಿಲ್ಲ. ಆದ್ದರಿಂದ ಶರೀರಕ್ಕೆ ಕೆಲಸ ಕೊಡಬೇಕು ಎಂದು ಕಿವಿಮಾತು ಹೇಳಿದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮೀಜಿ, ಖಜೂರಿ ಕೋರಣ್ಯೇಶ್ವರಮಠದ ಮುರುಘೇಂದ್ರ ಕೋರಣ್ಯೇಶ್ವರ ಸ್ವಾಮೀಜಿ, ಕಾಂಗ್ರಸ್ ಮುಖಂಡ ಡಿ.ಬಸವರಾಜ್, ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಸುರೇಶ್ ವೇದಿಕೆಯಲ್ಲಿದ್ದರು. ಪರಿಸರವಾದಿ ವೀರಾಚಾರಿ ಬಸವತತ್ವ ಧ್ವಜಾರೋಹಣ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.