ADVERTISEMENT

ದಾವಣಗೆರೆ | ಶಾರ್ಜಾ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:55 IST
Last Updated 1 ಮಾರ್ಚ್ 2026, 2:55 IST
   

ದಾವಣಗೆರೆ: ಯುಎಇ ಪ್ರವಾಸ ಕೈಗೊಂಡಿದ್ದ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ 50 ಜನ ಪ್ರವಾಸಿಗರು, ಪಶ್ಚಿಮ ಏಷ್ಯದಲ್ಲಿ ಉಂಟಾಗಿರುವ ಸಂಘರ್ಷದ ಹಿನ್ನೆಲೆಯಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ನೀಡುವಂತೆ ಕೋರಿದ್ದಾರೆ.

‘ಫೆಬ್ರುವರಿ 23ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5 ದಿನಗಳ ಪ್ರವಾಸಕ್ಕೆಂದು ದುಬೈ ಮತ್ತಿತರ ನಗರಗಳಿಗೆ ಬಂದಿದ್ದೆವು. ಫೆ.28ರಂದು ರಾತ್ರಿ ಶಾರ್ಜಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಾಪಸ್‌ ಬರಬೇಕಿತ್ತು. ಆದರೆ, ಇಲ್ಲಿನ ವಿಮಾನ ನಿಲ್ದಾಣವನ್ನು ಏಕಾಏಕಿ ಬಂದ್ ಮಾಡಿದ್ದಾರೆ. ವಿಮಾನವೂ ರದ್ದಾಗಿದೆ. ಎಲ್ಲರನ್ನೂ ಸಮೀಪದ ಹೋಟೆಲ್‌ವೊಂದಕ್ಕೆ ಕಳಿಸಿದ್ದಾರೆ’ ಎಂದು ಪ್ರವಾಸಕ್ಕೆ ತೆರಳಿದ್ದ ದಾವಣಗೆರೆ ಜಿಲ್ಲೆಯ ಜಗಳೂರಿನ ನಿವಾಸಿ, ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಜಿ.ಎ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹೋಟೆಲ್‌ನಲ್ಲಿ ದುಬಾರಿ ಶುಲ್ಕ ಆಕರಿಸುತ್ತಿದ್ದಾರೆ. ನಮ್ಮನ್ನು ವಾಪಸ್‌ ಕರೆಸಿಕೊಳ್ಳಲು ಭಾರತ ಸರ್ಕಾರ ಧಾವಿಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಇಲ್ಲಿ ಬಾಂಬ್ ಸ್ಫೋಟ ಅಥವಾ ಇನ್ನಿತರ ಅವಘಡಗಳು ಸಂಭವಿಸಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣವನ್ನು ಮುಚ್ಚಿದ್ದಾರೆ. ಜಗಳೂರು ತಾಲ್ಲೂಕಿನ ತೋರಣಗಟ್ಟೆಯ 15 ಜನ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಯವರು ಸೇರಿದಂತೆ ಒಟ್ಟು 50 ಜನ ಒಟ್ಟುಗೂಡಿ ಪ್ರವಾಸಕ್ಕೆ ತೆರಳಿದ್ದಾಗಿ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.