ದಾವಣಗೆರೆ: ಕೋವಿಡ್–19 ಮಾರ್ಗಸೂಚಿ ಅನ್ವಯ ಸುರಕ್ಷತಾ ಕ್ರಮಗಳೊಂದಿಗೆ ನಗರದ 6 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕಾರ್ಯ ಸೋಮವಾರ ಆರಂಭವಾಯಿತು.
ನಗರದ ರಾಜನಹಳ್ಳಿ ಸೀತಮ್ಮ ಪ್ರೌಢಶಾಲೆ, ಪಿ.ಜೆ. ಬಡಾವಣೆಯ ಸರ್ಕಾರಿ ಪದವಿಪೂರ್ವ ಕಾಲೇಜು, ಡಿ.ಆರ್.ಆರ್ ಪ್ರೌಢಶಾಲೆ. ಸಿದ್ದಗಂಗಾ ಪ್ರೌಢಶಾಲೆ, ಮಾಗನೂರು ಬಸಪ್ಪ ಹಾಗೂ ಸೇಂಟ್ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅಂತರ ಕಾಯ್ದುಕೊಂಡು ಶಿಕ್ಷಕರು ಮೌಲ್ಯಮಾಪನ ನಡೆಸಿದರು.
ಕಡ್ಡಾಯ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್, ನೀರಿನ ಬಾಟಲಿ ಹಾಗೂ ಊಟಗಳೊಂದಿಗೆ ಶಿಕ್ಷಕರು ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಮೌಲ್ಯಮಾಪನ ನಡೆಸುತ್ತಿದ್ದಾರೆ. ಒಬ್ಬರು ಮತ್ತೊಬ್ಬ ಶಿಕ್ಷಕರ ನಡುವೆ ಮೂರು ಅಡಿ ಅಂತರವನ್ನು ಕಾಯ್ದುಕೊಳ್ಳುವಂತೆ ಟೇಬಲ್ಗಳನ್ನು ಅಳವಡಿಸಲಾಗಿದೆ.
‘ಮೌಲ್ಯಮಾಪನಕ್ಕೆ ಹಾಜರಾಗುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಮೌಲ್ಯಮಾಪನದಿಂದ ವಿನಾಯಿತಿ ನೀಡಲಾಗಿದೆ. ಹೊನ್ನಾಳಿ, ಚನ್ನಗಿರಿ ಹಾಗೂ ಜಗಳೂರಿನಿಂದ ಮೌಲ್ಯಮಾಪಕರು ಕೇಂದ್ರಗಳಿಗೆ ಬರಲು ಬಸ್ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭಾಷಾ ವಿಷಯಗಳು ನಾಲ್ಕು ದಿವಸ ಹಾಗೂ ಕೋರ್ ವಿಷಯಗಳುಆರು ದಿವಸಗಳಲ್ಲಿ ಮುಗಿಯುವ ನಿರೀಕ್ಷೆ ಇದೆ. ಶಿಕ್ಷಕರು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ’ ಎಂದು ಹೇಳಿದರು.
ಸೋಮವಾರ ನಡೆದ ಮೌಲ್ಯಮಾಪನ ಕಾರ್ಯದಲ್ಲಿ 1,973 ಸಹಾಯಕ ಮೌಲ್ಯಮಾಪಕರನ್ನು ಹಂಚಿಕೆ ಮಾಡಲಾಗಿತ್ತು. ಅವರಲ್ಲಿ 1,684 ಮಂದಿ ನೋಂದಣಿ ಮಾಡಿಕೊಂಡಿದ್ದು, 289 ಮಂದಿ ಗೈರು ಹಾಜರಾಗಿದ್ದಾರೆ. 269 ಉಪ ಮೌಲ್ಯಮಾಪಕರನ್ನು ಹಂಚಿಕೆ ಮಾಡಿದ್ದು, ಅವರಲ್ಲಿ 178 ಮಂದಿ ನೋಂದಣಿ ಮಾಡಿಕೊಂಡಿದ್ದು, 91 ಮಂದಿ ಗೈರು ಹಾಜರಾಗಿದ್ದರು.
‘ಆರು ಜನ ಸಹಾಯಕ ಮೌಲ್ಯಮಾಪಕರಿಗೆ ಒಬ್ಬರು ಉಪಮುಖ್ಯ ಮೌಲ್ಯಮಾಪಕರು ಇದ್ದು, ಸಹಾಯಕ ಮೌಲ್ಯಮಾಪಕರು ಮಾಡಿದ ಮೌಲ್ಯಮಾಪನವನ್ನು ಇವರು ಪರಿಶೀಲಿಸಿ, ಅಂಕಗಳನ್ನು ಆನ್ಲೈನ್ಲ್ಲಿ ನೋಂದಾಯಿಸುತ್ತಾರೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.