ದಾವಣಗೆರೆ: ಸಂತೆ, ವಾರದ ಸಂತೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿರುವ ಮಾಹಿತಿ ಇಲ್ಲದ ತರಕಾರಿ ವ್ಯಾಪಾರಿಗಳು ಬೆಳಿಗ್ಗೆ 10 ಗಂಟೆಯ ವರೆಗೆ ವ್ಯಾಪಾರ ಮಾಡಲು ಕೆ.ಆರ್. ಮಾರುಕಟ್ಟೆಗೆ ಬಂದಿದ್ದರು. ತಹಶೀಲ್ದಾರ್ ಗಿರೀಶ್ ಮತ್ತು ಸಿಬ್ಬಂದಿ ಅಲ್ಲಿಗೆ ತೆರಳಿ ಭಾನುವಾರದ ಸಂತೆ ಬಂದ್ ಮಾಡಿಸಿದರು.
ರಾಜ್ಯ ಸರ್ಕಾರ ಈ ಹಿಂದೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10 ಗಂಟೆಯ ವರೆಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ, ವ್ಯಾಪಕವಾಗಿ ಕೊರೊನಾ ಹರಡುತ್ತಿರುವುದರಿಂದ ಶನಿವಾರ ಮಾರ್ಗಸೂಚಿಗೆ ತಿದ್ದುಪಡಿ ತಂದು ವಾರದ ಸಂತೆ ಸಂಪೂರ್ಣ ಬಂದ್ ಮಾಡಿಸಲು ಆದೇಶ ಹೊರಡಿ ಸಿತ್ತು. ಈ ಆದೇಶದಂತೆ ಬೆಳಿಗ್ಗೆ 6ಕ್ಕೆ ತಹಶೀಲ್ದಾರ್ ಸಂತೆ ಬಂದ್ ಮಾಡಲು ಬಂದಾಗ ಕೆಲ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡಿ. ಈಗಿನ ಮಾರ್ಗಸೂಚಿ ಪ್ರಕಾರ ಸಂತೆ ನಡೆಸುವಂತಿಲ್ಲ ಎಂದು ಅವರ ಮನವೊಲಿಸಿದರು.
ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಪೊಲೀಸರು ಈ ಸಂದರ್ಭದಲ್ಲಿ ಇದ್ದರು. ಎಲ್ಲ ಕಡೆಗಳಲ್ಲಿ ತರಕಾರಿ, ಅಗತ್ಯ ವಸ್ತುಗಳ ಖರೀದಿಗೆ ಭಾರಿ ಸಂಖ್ಯೆಯ ಜನ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.