ಬಂಧನ
(ಸಾಂದರ್ಭಿಕ ಚಿತ್ರ)
ಹರಿಹರ: ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಇಲ್ಲಿನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ನಿವಾಸಿಗಳಾದ ಸುನೀತಾ (48), ರಾತಿಯಾ ಉಪಾಧ್ಯಾ (40) ಬಂಧಿತ ಆರೋಪಿಗಳು.
ಕುಮಾರಪಟ್ಟಣಂ ನಿವಾಸಿ ಪವಿತ್ರಾ ಪಿ.ಎಂ. ಅವರು ಕಳೆದ ಫೆ.13ರಂದು ತಮ್ಮ ತವರೂರಾದ ನಾಗಸಮುದ್ರಕ್ಕೆ ತೆರಳಲೆಂದು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಮಾಂಗಲ್ಯ ಸರ ಕಳವಾಗಿದ್ದು, ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಬುಧವಾರ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿ ತಿರುಗಾಡುತ್ತಿದ್ದರು. ಈ ವೇಳೆ ಮತ್ತೆ ಕಳ್ಳತನ ಮಾಡಲು ಬಂದಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಶಿಕಾರಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 30 ಗ್ರಾಂ ಚಿನ್ನದ ಸರ ಕಳವು ಪ್ರಕರಣದಲ್ಲೂ ಭಾಗಿಯಾಗಿರುವುದು ತಿಳಿದುಬಂದಿದೆ. ಆರೋಪಿಗಳಿಂದ ಒಟ್ಟು 65 ಗ್ರಾಂ ಚಿನ್ನದ ಎರಡು ಸರಗಳನ್ನು ವಶಪಡಿಸಿಕೊಂಡು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಾರ್ಯಾಚರಣೆ ನಡೆಸಿದ ನಗರ ಠಾಣೆ ಇನ್ಸ್ಪೆಕ್ಟರ್ ಎಸ್.ದೇವಾನಂದ್, ಪಿಎಸ್ಐಗಳಾದ ಶ್ರೀಪತಿ ಗಿನ್ನಿ, ವಿಜಯ್ ಜಿ.ಎಸ್, ಸಿಬ್ಬಂದಿಯಾದ ನಾಗರಾಜ ಸುಣಗಾರ, ರವಿ ಆರ್., ಸಿದ್ದೇಶ್ ಎಚ್., ರವಿನಾಯ್ಕ. ರುದ್ರಸ್ವಾಮಿ ಕೆ.ಸಿ., ಹನುಮಂತ ಗೋಪನಾಳ, ರವಿ ಕೆ., ಸಿದ್ದರಾಜು ಎಸ್.ಬಿ., ಪ್ರೇಮಾ, ಕರಿಯಪ್ಳ, ರೇಣುಕಾ, ಕವಿತಾ, ಕಾಳಮ್ಮ ಅವರನ್ನು ಎಸ್ಪಿ ಉಮಾ ಪ್ರಶಾಂತ ಪ್ರಶಂಸಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.