ದಾವಣಗೆರೆ: ಕೆಲಸಕ್ಕೆ ಹೋಗಲು, ಅಗತ್ಯ ವಸ್ತು ತರಲು ಹೊರಗೆ ಹೋಗಲು ಪಾಸ್ ಇದೆಯೇ ಎಂದು ಬಹಳಷ್ಟು ಮಂದಿ ಕೇಳುತ್ತಿದ್ದಾರೆ. ಯಾವ ಪಾಸ್ಗಳೂ ಇರುವುದಿಲ್ಲ. ಕೆಲಸ ಮಾಡುವವರು ಆಯಾ ಸಂಸ್ಥೆ, ಕಾರ್ಖಾನೆಗಳಿಂದ ಗುರುತಿನ ಚೀಟಿ ಪಡೆಯಬೇಕು. ಅದುವೇ ಪಾಸ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಪಷ್ಟಪಡಿಸಿದ್ದಾರೆ.
ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಅಲ್ಲದೇ ಸೋಮವಾರದಿಂದ ಶುಕ್ರವಾರದವರೆಗೆ ಹಗಲು ಹೊತ್ತಿನಲ್ಲಿ ಏನಿರುತ್ತದೆ ಎಂಬ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆಹಾರ, ನಿರ್ಮಾಣ ಕಾಮಗಾರಿಯ ಅಗತ್ಯ ವಸ್ತುಗಳು ಹೊರತುಪಡಿಸಿ ಉಳಿದೆಲ್ಲವನ್ನು ಬಂದ್ ಮಾಡಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಾಗಿ ಚಿನ್ನ, ಬೆಳ್ಳಿ ಅಂಗಡಿಗಳು, ಚಪ್ಪಲಿ, ಫ್ಯಾಶನ್ ಸ್ಟೋರ್ ಸಹಿತ ಅಂಗಡಿಗಳು ಬಂದ್ ಆಗಲಿವೆ ಎಂದು ತಿಳಿಸಿದರು.
ಹೋಟೆಲ್, ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಮಾತ್ರ ನೀಡಬೇಕು. ಸ್ವಿಗ್ಗಿ, ಝೊಮಾಟೊ ಮುಂತಾದ ಹೋಮ್ ಡೆಲಿವರಿಯವರಿಗೆ ರಾತ್ರಿ 11 ಗಂಟೆಯವರೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಯಾರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಅವರು ಪಾರ್ಸೆಲ್ ಒಯ್ಯುವ ಹೋಟೆಲ್ಗಳ ಕಿಚನ್ ಅಷ್ಟೇ ರಾತ್ರಿ 11ರವರೆಗೆ ತೆರೆದಿಡಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ವಾರಾಂತ್ಯದಲ್ಲಿ ಮದ್ಯ ಇಲ್ಲ: ಮದ್ಯ ಮಾರಾಟಕ್ಕೆ ಬೆಳಿಗ್ಗೆ 6ರಿಂದ ರಾತ್ರಿ 9 ಗಂಟೆಯ ವರೆಗೆ ಅವಕಾಶ ನೀಡಲಾಗಿದೆ. ಕರ್ಫ್ಯೂ ಸಮಯದಲ್ಲಿ ಮುಚ್ಚಬೇಕು. ಅಲ್ಲದೇ ವಾರಾಂತ್ಯದ ಕರ್ಫ್ಯೂ ಇರುವ ಶನಿವಾರ ಮತ್ತು ಭಾನುವಾರ ಹಗಲು ಹೊತ್ತು ಕೂಡ ತೆರೆಯುವಂತಿಲ್ಲ ಎಂದು ಅಬಕಾರಿ ಆಯುಕ್ತರೇ ಆದೇಶ ಹೊರಡಿಸಿದ್ದಾರೆ ಎಂದರು.
ಯಾವುದೇ ಧಾರ್ಮಿಕ, ಸಾಮಾಜಿಕ, ರಾಜಕೀಯ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಬಾರದು. ಎಲ್ಲೂ ಜನ ಸೇರಿಸಬಾರದು ಎಂದು ಸ್ಪಷ್ಟಪಡಿಸಿದರು.
ಕರ್ಫ್ಯೂ ಸಮಯದಲ್ಲಿ ನಾಲ್ಕು ಜನಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ. ಈ ಎಲ್ಲ ನಿಯಮಗಳು ಮೇ 4ರವರೆಗೆ ಜಾರಿಯಲ್ಲಿರುತ್ತವೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ತಹಶೀಲ್ದಾರ್ ಗಿರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.