ದಾವಣಗೆರೆ: ನಾನು ಪರಿಷತ್ತಿನ ಅಧ್ಯಕ್ಷೆಯಾದರೆ ತಾಲ್ಲೂಕು ಅಧ್ಯಕ್ಷರ ಆಯ್ಕೆಯನ್ನು ಮತದಾನದ ಮೂಲಕ ನಡೆಯುವಂತೆ ಬೈಲಾದಲ್ಲಿ ತಿದ್ದುಪಡಿ ತರುತ್ತೇನೆ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ. ಸರಸ್ವತಿ ಚಿಮ್ಮಲಗಿ ಹೇಳಿದರು.
‘ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಎರಡು ಕಾರ್ಯದರ್ಶಿ ಹುದ್ದೆಗಳು ಇದ್ದು, ಒಬ್ಬರು ಮಹಿಳೆ ಹಾಗೂ ಒಬ್ಬರು ಪುರುಷರು ಆಗುವಂತೆ ಅವಕಾಶ ಕಲ್ಪಿಸಲಾಗುವುದು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ 85 ಸಾವಿರ ಮಹಿಳಾ ಮತದಾರರಿದ್ದಾರೆ. ಮಹಿಳಾ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದು, ಮೊದಲ ಬಾರಿಗೆ ಮಹಿಳೆ ಎಂಬ ಮಾತು ಕೇಳಿ ಬರುತ್ತಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕನ್ನಡ ನಾಡು - ನುಡಿ, ನೆಲ, ಜಲ ಹಾಗೂ ಗಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಕಾಳಜಿವಹಿಸುವುದು, ಸಾಹಿತ್ಯಕ ಸಂಧರ್ಭದ ಎಲ್ಲ ಹಂತಗಳಲ್ಲಿ ಮಹಿಳೆಯರಿಗೆ ಸಮಾನ ಆದ್ಯತೆ ನೀಡುವುದು. ಅಲ್ಲದೇ ತಾಲ್ಲೂಕು ಅಧ್ಯಕ್ಷರ ಆಯ್ಕೆ ಮುಂತಾದ ವಿಷಯಗಳ ಕುರಿತು ಪರಿಷತ್ತಿನ ಬೈಲಾದಲ್ಲಿ ತಿದ್ದುಪಡಿ ತರಲಾಗುವುದು’ ಎಂದು ಭರವಸೆ ನೀಡಿದರು.
‘ಕಲಬುರ್ಗಿಯಲ್ಲಿ ನಡೆದ 58ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯದರ್ಶಿ, ಲೇಖಕಿಯರ ಸಮ್ಮೇಳನದಲ್ಲಿ ಸಭಾಧ್ಯಕ್ಷೆ
ಯಾಗಿದ್ದೆ. ಸಾಹಿತ್ಯಿಕ ಚಟುವಟಿಕೆ ನಿರಂತರವಾಗಿ ನಡೆದಿದೆ. ನಾಟಕ, ಕಾವ್ಯ, ಜನಪರ ಹೋರಾಟಗಳು ಹಾಗೂ ಕೃಷಿಯಲ್ಲೂ ತೊಡಗಿಸಿಕೊಂಡಿದ್ದೇನೆ’ಎಂದು ಹೇಳಿದರು.
‘12ನೇ ಶತಮಾನದಲ್ಲಿ ಶರಣರು ಮಹಿಳೆಯನ್ನು ಉತ್ತುಂಗಕ್ಕೆ ಏರಿಸಿದ್ದರು. ಅಂಬೇಡ್ಕರ್ ಅವರು ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಿದರು. ಆದರೆ ಸರಸ್ವತಿ ಮಂದಿರದಲ್ಲಿ ಎಂದೇ ಕರೆಯಲ್ಪಡುವ ಕಸಾಪಗೆ ಮಹಿಳೆ ಹೋಗಲು ಆಗಿಲ್ಲ’ ಎಂದು ವಿಷಾದಿಸಿದರು.
‘ಕಸಾಪ ಚುನಾವಣೆಯಲ್ಲಿ ಜಾತಿ ಇರಬಾರದು. ಆದರೆ ಇಲ್ಲಿ ಜಾತಿ ಇರುವುದು ವಿಷಾದದ ಸಂಗತಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬರಹಗಾರ ಮಲ್ಲಿಕಾರ್ಜುನ ಕಡಕೋಳ, ಅಶ್ವಿನಿ ತಳವಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.