ಅಳ್ನಾವರ: ಸಮೀಪದ ಹೊನ್ನಾಪೂರ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಅಲ್ಲಮಪ್ರಭು ಜಾತ್ರಾ ಮಹೋತ್ಸವ ಸೋಮವಾರ ನಡೆಯಿತು.
ಜಾತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಗ್ರಾಮದ ಬೀದಿಗಳನ್ನು ಬಣ್ಣ ಬಣ್ಣದ ಪರಿಪರಿಯಿಂದ ಹಾಗೂ ಮಾವಿನ ತಳಿರು ತೋರಗಳಿಂದ ಸಿಂಗರಿಸಲಾಗಿತ್ತು. ಮಕ್ಕಳ ಆಟಿಕೆಗಳ ಮಾರಾಟ ಭರದಿಂದ ಸಾಗಿತು. ಚಕ್ಕಡಿ ಆಟ, ಕುಸ್ತಿ ಆಟ ಜನರ ಮನ ತಣಿಸಿದವು. ಪಲ್ಲಕಿ ಸೇವೆ, ಅನ್ನ ಸಂತರ್ಪಣೆ ನಡೆಯಿತು. ಪ್ರದರ್ಶನಗೊಂಡ ಎರಡು ನಾಟಕಗಳು ಗ್ರಾಮಸ್ಥರಿಗೆ ಮನರಂಜನೆ ನೀಡಿದವು. ನಾಟಕ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ಅವರನ್ನು ಸತ್ಕರಿಸಲಾಯಿತು.
ಕುಸ್ತಿ ನೋಡಲು ಮುಗಿ ಬಿದ್ದ ಜನ: ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕುಸ್ತಿ ಪದ್ಯ ನೋಡಲು ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಆರಂಭದಲ್ಲಿ ಪುಟ್ಟ ಪೈಲ್ವಾನರ ಕುಸ್ತಿ ನಡೆಯಿತು. ವಿಜೇತರಿಗೆ ಬಾಳೆಹಣ್ಣು ಬಹುಮಾನ ನೀಡಲಾಯಿತು. ಪೈಲ್ವಾನರ ಕುಸ್ತಿ ಪಟ್ಟುಗಳು ಗಮನಸೆಳೆದವು.
ಜಾತ್ರೆಯಲ್ಲಿ ಪ್ರತಿಯೊಂದು ಮನೆಯಿಂದ ಒಬ್ಬರು ಕುಸ್ತಿ ಆಡಬೇಕು ಎಂಬ ಸಂಪ್ರದಾಯ ಹಿರಿಯರ ಕಾಲದಿಂದ ನಡೆದು ಬಂದಿದೆ. ಕುಸ್ತಿ ಆಡುವವರು ಎದುರಾಳಿಯನ್ನು ತಾವೇ ಹುಡುಕಿಕೊಂಡು ಬರಬೇಕು. ಇಲ್ಲಿ ಯಾವುದೇ ವಯಸ್ಸಿನ ಅಥವಾ ತೂಕದ ನಿಬಂಧನೆ ಇಲ್ಲ ಎಂದು ಹಿರಿಯರು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.