ADVERTISEMENT

ನೆಲ, ಜಲ ವಿಷಯದಲ್ಲಿ ರಾಜಕೀಯ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಮಹದಾಯಿ-ಕಳಸಾಬಂಡೂರಿ ರೈತ ಹೋರಾಟ ಸಮಿತಿ ಸದಸ್ಯರ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 4:19 IST
Last Updated 28 ಜುಲೈ 2025, 4:19 IST
ನವಲಗುಂದದ ಮಹಾದಾಯಿ ಹೋರಾಟ ವೇದಿಕೆಗೆ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು
ನವಲಗುಂದದ ಮಹಾದಾಯಿ ಹೋರಾಟ ವೇದಿಕೆಗೆ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು   

ನವಲಗುಂದ: ‘ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ ಅವರನ್ನು ಒಂದು ವಾರದೊಳಗೆ ಭೇಟಿಯಾಗಿ ಮಹದಾಯಿ ಯೋಜನೆಗೆ ವನ್ಯ ಜೀವಿ ಮಂಡಳಿ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಭಾನುವಾರ ಪಟ್ಟಣದಲ್ಲಿ ಮಹದಾಯಿ-ಕಳಸಾಬಂಡೂರಿ ರೈತ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರಿಂದ ಮನವಿ ಸ್ವೀಕರಿಸಿ ಮಾತನಾಡಿ, ರಾಜ್ಯದ ನೆಲ ಜಲದ ವಿಷಯ ಬಂದಾಗ ನಾವು ರಾಜಕಾರಣ ಮಾಡಿಲ್ಲ. ಬೇರೆಯವರು ರಾಜಕಾರಣ ಮಾಡಿದರೂ ನಾವು ಅದನ್ನು ತೆಲೆಗೆ ತೆಗೆದುಕೊಂಡಿಲ್ಲ. ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸರಿಯಲ್ಲ. ನಮ್ಮ ರಾಜ್ಯದ ಹಿತ ಕಾಪಾಡುವ ಸಲುವಾಗಿ ನಾವು ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ತೆಗೆದುಕೊಳ್ಳುತ್ತೇವೆ. ನಮ್ಮ ರಾಜ್ಯದ ಬಗ್ಗೆ ಮಾತನಾಡುವ ಹಕ್ಕು ಅವರಿಗೆ ಇಲ್ಲ. ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಮಹದಾಯಿ ಹೋರಾಟ ಅಂತಿಮ ಘಟ್ಟಕ್ಕೆ ಬಂದಿದ್ದು, ಕಳಸಾ ಬಂಡೂರಿ ನೀರು ಪಡೆಯಬೇಕು ಎಂದು ಯಡಿಯೂರಪ್ಪ ಸಿಎಂ ಆಗಿದ್ದಾಗ ಈಶ್ವರಪ್ಪ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಆರಂಭಿಸಿ, ನಾನು ನೀರಾವರಿ ಸಚಿವನಾಗಿದ್ದಾಗ ₹ 300 ಕೋಟಿ ಮೀಸಲಿಟ್ಟು ಕೆನಾಲ್ ಲಿಂಕ್ ಕಾಮಗಾರಿ ಮಾಡಿದ್ದೇವೆ ಎಂದು ಹೇಳಿದರು.

ADVERTISEMENT

ಮಹದಾಯಿಯಿಂದ ಮಲಪ್ರಭಾ ನದಿಗೆ ನೀರು ಹೇಗೆ ಬರಬೇಕು ಎಂದು ಕಳಸಾ ಲಿಂಕ್ ಕಾಲುವೆ ಮಾಡಿದ್ದೇವೆ. ಬಂಡೂರಿ ನಾಲಾಗೆ ಲಿಂಕ್ ಕಾಲುವೆ ಮಾಡುವುದು ಬಾಕಿ ಉಳಿದಿದ್ದು ಈಗಿನ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದ ಬೊಮ್ಮಾಯಿ ಅವರು ನಾನು ಮುಖ್ಯಮಂತ್ರಿ ಆಗುವ ಮುನ್ನ ಗೃಹ ಸಚಿವನಾಗಿದ್ದಾಗ ಕೇಂದ್ರ ಸರ್ಕಾರದ ಬಳಿ ಹೋಗಿ ಟ್ರಿಬ್ಯುನಲ್ ಆದೇಶವನ್ನು ಗೆಜೆಟ್ ನೋಟಿಫಿಕೇಶನ್ ಮಾಡಿಸಿದ್ದೇವು ಎಂದು ಹೇಳಿದರು.

ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ, ಗಂಗಪ್ಪ ಮನಮಿ, ಸಾಯಿಬಾಬಾ ಆನಗೊಂದಿ, ಎ.ಬಿ.ಹಿರೇಮಠ, ಅಡಿವೆಪ್ಪ ಮನಮಿ, ಯಲ್ಲಪ್ಪ ದಾಡಿಬಾವಿ, ಎಸ್.ಬಿ.ದಾನಪ್ಪಗೌಡ್ರ, ಸುಭಾಷಚಂದ್ರಗೌಡ್ರು ಪಾಟೀಲ್, ರೋಹಿತ್ ಮತ್ತಿಹಳ್ಳಿ, ಮಲ್ಲೇಶ ಉಪ್ಪಾರ, ಮಲ್ಲಿಕಾರ್ಜುನ ಸಂಗನಗೌಡ್ರ, ಪ್ರಭು ಇಬ್ರಾಹಿಂಪುರ, ಸಿದ್ದಲಿಂಗಪ್ಪ ಹಳ್ಳದ ಗಂಗಪ್ಪ ಸಂಗಟಿ, ಅಂದಪ್ಪ ತೋಟದ ಮುಂತಾದವರು ಇದ್ದರು.

ಅಂತಿಮ ಘಟ್ಟಕ್ಕೆ ಹೋರಾಟ

‘ಇನ್ನೂ ಎರಡನೇಯದಾಗಿ ಡಿಪಿಆರ್ ಮಾಡಿಸಿ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದೆವು. ನಾನು ಮುಖ್ಯಮಂತ್ರಿ ಆಗಿದ್ದಾಗ ಪರಿಸರ ಇಲಾಖೆಯ ಅನುಮತಿ ಪಡೆದಿದ್ದೇವೆ. ಪರಿಸರ ಇಲಾಖೆ ಅನುಮತಿ ಪಡೆದ ಮೇಲೆ ಮುಗಿಯಿತು’ ಎಂದು ಸಂಸದ ಬೊಮ್ಮಾಯಿ ಹೇಳಿದರು. ಗೋವಾದವರು ವನ್ಯ ಜೀವಿ ನೆಪ ಹೇಳುತ್ತಿದ್ದಾರೆ. ನಮ್ಮ ರಾಜ್ಯದ ವನ್ಯ ಜೀವಿ ರಕ್ಷಣೆ ಮಾಡುವುದು ನಮ್ಮ ಹಕ್ಕು. ಅದನ್ನು ಕೇಳುವ ಹಕ್ಕು ಗೋವಾದವರಿಗಿಲ್ಲ. ಅದನ್ನೂ ಕೇಂದ್ರ ಸಚಿವರಿಗೆ ತಿಳಿಸಿದ್ದೇನೆ. ಅವರು ಈ ವಾರದಲ್ಲಿ ಸಮಯ ಕೊಡುವುದಾಗಿ ಹೇಳಿದ್ದಾರೆ. ಮಹದಾಯಿ ವ್ಯಾಪ್ತಿಯಲ್ಲಿ ಬರುವ ಸಂಸದರಾದ ನಾನು ಜಗದೀಶ್ ಶೆಟ್ಟರ ಪಿ.ಸಿ.ಗದ್ದಿಗೌಡರ ಹಾಗೂ ಇನ್ನೂ ಅನೇಕ ಸಂಸದರು ಸೇರಿ ಅವರಿಗೆ ಇನ್ನಷ್ಟು ವಿಷಯಗಳನ್ನು ಮನವರಿಕೆ ಮಾಡಿ ವನ್ಯ ಜೀವಿ ಮಂಡಳಿ ಅನುಮತಿ ಪಡೆಯಲು ಪ್ರಯತ್ನಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.