ADVERTISEMENT

ಯಶಸ್ವಿ ಉದ್ಯಮಕ್ಕೆ ಸಂವಹನ ಅಗತ್ಯ: ಎವೆಲೊ ರಾಯ್‌

ಕರ್ನಾಟಕ ವಾಣಿಜ್ಯೋಮ ಸಂಸ್ಥೆಯಲ್ಲಿ ಯುವ ಉದ್ಯಮಿಗಳ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 4:59 IST
Last Updated 27 ಏಪ್ರಿಲ್ 2022, 4:59 IST
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಂಗಳವಾರ ನಡೆದ ಯುವ ಉದ್ಯಮಿಗಳ ಕಾರ್ಯಾಗಾರದಲ್ಲಿ ಉದ್ಯಮಿ ಎವೆಲೊ ರಾಯ್‌ ಮಾತನಾಡಿದರು
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಂಗಳವಾರ ನಡೆದ ಯುವ ಉದ್ಯಮಿಗಳ ಕಾರ್ಯಾಗಾರದಲ್ಲಿ ಉದ್ಯಮಿ ಎವೆಲೊ ರಾಯ್‌ ಮಾತನಾಡಿದರು   

ಹುಬ್ಬಳ್ಳಿ: ‘ಆರಂಭದಲ್ಲಿ ಉದ್ಯಮ ಚಿಕ್ಕದಿದ್ದು, ಆಲೋಚನೆ ವಿಸ್ತಾರವಾಗಿರಬೇಕು. ಪರಿಶ್ರಮ ಮತ್ತು ಬದ್ಧತೆ ಜೊತೆಗೆ ಮಾರುಕಟ್ಟೆ ಸಂವಹನ ಚಾತುರ್ಯವಿದ್ದರೆ ಯಶಸ್ವಿ ಉದ್ಯಮಿಯಾಗಬಹುದು’ ಎಂದು ಸ್ಟಾರ್ಟ್‌ಅಪ್‌ ಮೆಂಟರ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎವೆಲೊ ರಾಯ್‌ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಇಸ್ಕಾನ್‌ ಹಾಗೂ ಐಬಿಎಂಆರ್‌ ಕಾಲೇಜು ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯುವ ಉದ್ಯಮಿಗಳ ಕಾರ್ಯಾಗಾರದಲ್ಲಿ ಸ್ಟಾರ್ಟ್‌ಅಪ್‌ ಅಭಿವೃದ್ಧಿ ಮತ್ತು ಡಿಜಿಟಲೈಸೇಷನ್‌ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಯಾವುದೇ ಉದ್ಯಮ ಸ್ಥಾಪನೆ ಮಾಡುವ ಮೊದಲು ಸಂಪೂರ್ಣ ಮಾಹಿತಿ ಪಡೆದು, ಸಾಧಕ–ಬಾಧಕಗಳ ಕುರಿತು ಆಲೋಚಿಸಬೇಕು. ಸಣ್ಣದಾಗಿ ಆರಂಭವಾದ ಉದ್ಯಮ ಹಂತ ಹಂತವಾಗಿ ಅಭಿವೃದ್ಧಿಯತ್ತ ಸಾಗಬೇಕು’ ಎಂದರು.

ADVERTISEMENT

‘ಉದ್ಯಮದಲ್ಲಿ ಎದುರಾದ ಸಮಸ್ಯೆಗಳನ್ನೆಲ್ಲ ಬರೆದಿಡಬೇಕು. ಲೆಕ್ಕದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಯಾವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ ಎನ್ನುವ ಕುರಿತು ಸಂಶೋಧನೆ ನಡೆಸಬೇಕು. ಆಮದು–ರಫ್ತುಗಳ ರಹಸ್ಯ ಅರಿತು ಉದ್ಯಮದಲ್ಲಿ ಪ್ರಗತಿ ಸಾಧಿಸಬೇಕು’ ಎಂದು ಹೇಳಿದರು.

‘ಕೋವಿಡ್‌ ಸಂದರ್ಭದಲ್ಲಿ ಡಿಜಿಟಲ್‌ ಬಳಕೆ ಹೆಚ್ಚಿತು. ಅದನ್ನು ಬಳಸಿಕೊಂಡು ಉದ್ಯಮ ಮುನ್ನಡೆಸಲಾಯಿತು. ಹತ್ತಾರು ಮಂದಿ ಮಾಡುವ ಕೆಲಸ ಇಬ್ಬರೇ ಮಾಡಬಹುದು ಎನ್ನುವುದು ಅರಿವಾಯಿತು’ ಎಂದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ನಿರ್ದೇಶಕ ಜಿ.ಆರ್‌. ಅಕಡಾಸ್‌, ‘ಅನೇಕ ಮಂದಿ ಉದ್ಯಮದ ಬಗ್ಗೆ ಜ್ಞಾನವಿಲ್ಲದೆ ಹಣ ಹೂಡಿಕೆ ಮಾಡಿ ನಷ್ಟ ಹೊಂದುತ್ತಾರೆ. ದೆಹಲಿ, ಬೆಂಗಳೂರು, ಹುಬ್ಬಳ್ಳಿಯಲ್ಲೂ ಸಾಕಷ್ಟು ಉದ್ಯಮ ಆರಂಭವಾಗಿವೆ. ಆದರೆ, ಚಾಲ್ತಿಯಲ್ಲಿರುವುದು ಮಾತ್ರ ಬಹಳ ಕಡಿಮೆ’ ಎಂದರು.

ಕೆಸಿಸಿಐ ಅಧ್ಯಕ್ಷ ವಿನಯ ಜವಳಿ, ರಿಯಾಜ್‌ ಬಸ್ರಿ, ಶಾಶ್ವತ್‌ ಪೂಜಾರಿ, ಸತೀಶ ಕೊಟಾ, ಪ್ರವೀಣ ಅಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.