ADVERTISEMENT

ಧಾರವಾಡ | ಒಳ ಮೀಸಲಾತಿಗೆ ಸಂಘಟಿತ ಹೋರಾಟ ಅಗತ್ಯ: ಸಚಿವ ಆರ್.ಬಿ. ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:04 IST
Last Updated 2 ಫೆಬ್ರುವರಿ 2026, 5:04 IST
ಧಾರವಾಡದಲ್ಲಿ ನಡೆದ 2ನೇ ರಾಜ್ಯಮಟ್ಟದ ಮಾದಿಗ ವಕೀಲರ ಸಮ್ಮೇಳನವನ್ನು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದರು
ಧಾರವಾಡದಲ್ಲಿ ನಡೆದ 2ನೇ ರಾಜ್ಯಮಟ್ಟದ ಮಾದಿಗ ವಕೀಲರ ಸಮ್ಮೇಳನವನ್ನು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದರು   

ಧಾರವಾಡ: ‘ವಕೀಲರ ಶಕ್ತಿ ಸಂವಿಧಾನದ ಶಕ್ತಿಯಾಗಿದೆ. ಮಾದಿಗ ಸಮಾಜದ ವಕೀಲರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಇಲ್ಲಿನ ಕೆಲಗೇರಿ ರಸ್ತೆಯ ಸಿದ್ಧೇಶ್ವರ ಸ್ವಾಮೀಜಿ ನಗರದ ಬಿ.ಡಿ. ಪಾಟೀಲ ಕನ್ವೆನ್ಷನ್ ಸಭಾಂಗಣದ ಭಾನುವಾರ ಆಯೋಜಿಸಿದ್ದ 2ನೇ ರಾಜ್ಯಮಟ್ಟದ ಮಾದಿಗ ವಕೀಲರ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಕೀಲರು ಸಮುದಾಯದ ಇಂದಿನ ಸ್ಥಿತಿಗತಿ ಬಗ್ಗೆ ಚರ್ಚಿಸಬೇಕು. ಎಲ್ಲ ಸಮಾಜಗಳಿಗೂ ಸೌಲಭ್ಯ ಹಂಚಿಕೆಯಾದಂತೆ ನಮ್ಮ ಸಮುದಾಯಕ್ಕೂ ಹಂಚಿಕೆ ಆಗಬೇಕಾದರೆ ಹೋರಾಟ ಅಗತ್ಯವಾಗಿದೆ. ಮಾದಿಗ ಜನಾಂಗದ ಇತಿಹಾಸದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಿ, ಆಸಕ್ತರನ್ನು ರಾಜಕೀಯವಾಗಿ ಮುಂದೆ ತರುವ ಅಗತ್ಯವಿದೆ’ ಎಂದರು.

ADVERTISEMENT

ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್. ಅರುಣಕುಮಾರ ಮಾತನಾಡಿ,
‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಹಾಗಾಗಿ, ಒಳ ಮೀಸಲಾತಿ ಜಾರಿಗೆ ಇದ್ದ ಎಲ್ಲ ತೊಡಕುಗಳೂ ನಿವಾರಣೆಯಾಗಿವೆ. ತೀರ್ಪು ಹೊರಬಿದ್ದ ತಕ್ಷಣ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಲಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರವೂ ಅದೇ ಮಾದರಿ ಅನುಸರಿಸಬೇಕು’ ಎಂದು ಆಗ್ರಹಿಸಿದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ‘ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಸಮಾಜ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಈವರೆಗೂ ಬೇಡಿಕೆ ಈಡೇರಿಲ್ಲ. ಮೀಸಲಾತಿ ಪಡೆದುಕೊಳ್ಳಲು ಸಮಾಜದವರು ಒಗ್ಗಟ್ಟು ಪ್ರದರ್ಶಿಸಬೇಕು. ಸಂಘಟಿತರಾಗಿ ಹೋರಾಡಬೇಕು. ಗುರಿ ಸಾಧಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ಐ.ಆರ್.ಎಸ್ ಅಧಿಕಾರಿ ಎಚ್.ಆರ್. ಭೀಮಾಶಂಕರ್, ವಕೀಲರಾದ ಮರಿಚನ್ನಮ್ಮ, ಎಂ.ದಾಸಯ್ಯ, ಹನುಮೇಶ ಗುಂಡೂರ್, ಬೂದಿತಿಟ್ಟು ರಾಜೇಂದ್ರ ಎಲ್., ಬಿಸ್ನಳ್ಳಿ ಜಯಪ್ಪ, ಚಂದ್ರಪ್ಪ, ಮಾಳಪ್ಪ ಕುರ್ಕಿ, ಚಂದ್ರಶೇಖರ ನಡುವಿಮನಿ, ಸುರೇಶ ಕೋಟೂರ, ಶಿವಕುಮಾರ ದೊಡ್ಡಮನಿ ಇದ್ದರು.

ಮಾದಿಗ ಸಮಾಜವು ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಸಮಾಜದ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಮೀಸಲಾತಿ ಅಗತ್ಯವಿದೆ ವೀರಭದ್ರಪ್ಪ
ಹಾಲಹರವಿ ಮಾಜಿ ಶಾಸಕ

‘ಶೀಘ್ರ ಜಾರಿಗೆ ಸರ್ಕಾರ ಕ್ರಮವಹಿಸಲಿ’

‘ಒಳ ಮೀಸಲಾತಿಗಾಗಿ ಅನೇಕರು ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರ ಪರಿಶ್ರಮದಿಂದ ಇಂದು ಗುರಿ ಮುಟ್ಟುವ ವಿಶ್ವಾಸ ಮೂಡಿದೆ. ಇದು ಸಮಾಜದ ಸಂಘಟಿತ ಹೋರಾಟಕ್ಕೆ ಸಿಕ್ಕ ಪ್ರತಿಫಲ’ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು. ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಸರ್ಕಾರದ ಆದೇಶಕ್ಕೆ ಕಾನೂನು ಬಲ ನೀಡುವ ಉದ್ದೇಶದಿಂದ ವಿಧಾನಮಂಡಲ ಅನುಮೋದನೆ ನೀಡಿದ್ದ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಸರ್ಕಾರವು ಅದಕ್ಕೆ ಸೂಕ್ತ ಸ್ಪಷ್ಟನೆ ನೀಡಬೇಕು. ಶೀಘ್ರ ಒಳ ಮೀಸಲಾತಿ ಜಾರಿಗೆ ಕ್ರಮವಹಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.