ಹುಬ್ಬಳ್ಳಿ: ಇಲ್ಲಿನ ಭವಾನಿ ನಗರದ ವ್ಯಕ್ತಿಯೊಬ್ಬರಿಗೆ ಮುಂಬೈ ಪೊಲೀಸ್ ಹೆಸರಲ್ಲಿ ವಾಟ್ಸ್ಆ್ಯಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿ ವಿವಿಧ ಖಾತೆಗಳಿಂದ ₹55,39,950 ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಎಸ್.ಎಸ್. ಪೂಜಾರ ವಂಚನೆಗೊಳದವರು. ಇವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿ, ಅಕ್ರಮ ಹಣ ವರ್ಗಾವಣೆಯಲ್ಲಿ ನಿಮ್ಮ ಹೆಸರು ಕೇಳಿಬಂದಿದ್ದು, ಖಾತೆಯಿಂದ ದೇಶದ್ರೋಹಿಗಳಿಗೆ ಹಣ ಸಂದಾಯವಾಗಿದೆ ಎಂದು ಹೇಳಿ ನಕಲಿ ದಾಖಲೆ ತೋರಿಸಿ ಬೆದರಿಸಿದ್ದಾರೆ. ಈಗಾಗಲೇ 135 ಜನರ ಬಂಧಿಸಿದ್ದು, ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ಬಂಧಿಸಲು ಸಿಬಿಐ ವಾರೆಂಟ್ ಇದ್ದು, ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಮೊದಲು ₹39,950 ವರ್ಗಾಯಿಸಿಕೊಂಡಿದ್ದಾನೆ. ಬಳಿಕ ವಿವಿಧ ಬ್ಯಾಂಕ್ನಲ್ಲಿದ್ದ ₹55,39,950 ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಮಿಷವೊಡ್ಡಿ ₹5.76 ಲಕ್ಷ ವಂಚನೆ
ಹಣ ಹೂಡಿಕೆಯಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಅಪರಿಚಿತನೊಬ್ಬ ಗಾಮನಗಟ್ಟಿಯ ಶಿವಾನಂದ ತಿಗಡಿ ಎಂಬುವವರಿಗೆ ₹5.76 ಲಕ್ಷ ವಂಚಿಸಿದ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ನಲ್ಲಿ ಫೇಸ್ಬುಕ್ ಬಳಸುವಾಗ ಬಂದ ಹಣ ಹೂಡಿಕೆಯ ಜಾಹೀರಾತು ಗಮನಿಸಿ, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಶಿವಾನಂದ ಅವರು ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿಯು ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸುವಂತೆ ತಿಳಿಸಿ ಟೆಲಿಗ್ರಾಂ ಐಡಿಗೆ ಸೇರಿಸಿದ್ದಾನೆ. ಈ ವೇಳೆ ₹800 ಪಡೆದು, ಲಾಭ ಎಂದು ₹1,040 ಮರಳಿಸಿದ್ದಾನೆ. ಹೀಗೆ ಹೆಚ್ಚಿನ ಹಣ ಹೂಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿ ಹಂತ ಹಂತವಾಗಿ ₹5.76 ಲಕ್ಷ ವರ್ಗಾಯಿಸಿಕೊಂಡು ಮರಳಿಸದೆ ವಂಚಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.