ADVERTISEMENT

ಗಂಡ, ಅತ್ತೆ, ಇಬ್ಬರು ನಾದಿನಿಯರಿಗೆ 10 ವರ್ಷ ಜೈಲು

ವರದಕ್ಷಿಣಿ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ: ಅಪರಾಧಿಗಳಿಗೆ ತಲಾ ₹52 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 13:48 IST
Last Updated 23 ಜನವರಿ 2020, 13:48 IST

ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳಕ್ಕೆ ನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಮೃತಳ ಗಂಡ, ಅತ್ತೆ ಹಾಗೂ ಇಬ್ಬರು ನಾದಿನಿಯರಿಗೆ ತಲಾ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹52 ಸಾವಿರ ದಂಡ ವಿಧಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ದ್ರಾಕ್ಷಾಯಿಣಿಯ ಗಂಡ ಕೃಷ್ಣಾ ಚಿನ್ನಪ್ಪಾ ದೇವಸೂರ, ಅತ್ತೆ ಶೆಟ್ಟಮ್ಮಾ (ಸಾವಿತ್ರಿ), ನಾದಿನಿಯರಾದ ಮಾಲತಿ ಚಿನ್ನಪ್ಪಾ ದೇವಸೂರ ಹಾಗೂ ವಿಜಯಲಕ್ಷ್ಮಿ ಚಿನ್ನಪ್ಪಾ ದೇವಸೂರ ಶಿಕ್ಷೆಗೆ ಒಳಗಾದವರು.

ಗೋಕುಲ ರಸ್ತೆಯ ರಾಮಲಿಂಗೇಶ್ವರನಗರ ಶಂಕ್ರಪ್ಪಾ ವಿರೂಪಾಕ್ಷಪ್ಪ ಗೆಜ್ಜಿ ಅವರ ಪುತ್ರಿ ದ್ರಾಕ್ಷಾಯಿಣಿ ಅವರ ವಿವಾಹ, ನವನಗರ ಬಳಿಯ ಶಿವಾನಂದನಗರದ ಕೃಷ್ಣಾ ಚಿನ್ನಪ್ಪಾ ದೇವಸೂರ ಅವರೊಂದಿಗೆ 2014ರಲ್ಲಿ ನಡೆದಿತ್ತು. ಗೆಜ್ಜಿ ಅವರು ವರದಕ್ಷಿಣೆಯಾಗಿ ಕೃಷ್ಣಾ ಅವರಿಗೆ ₹50 ಸಾವಿರ ನಗದು ಹಾಗೂ 2 ತೊಲೆ ಬಂಗಾರ ಕೊಟ್ಟಿದ್ದರು.

ADVERTISEMENT

ಆದರೆ, ಅಷ್ಟಕ್ಕೆ ಸುಮ್ಮನಾಗದ ಕೃಷ್ಣಾ ಕುಟುಂಬದವರು, ತವರಿನಿಂದ ₹5 ಲಕ್ಷ ತರುವಂತೆ ದ್ರಾಕ್ಷಾಯಿಣಿ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ದ್ರಾಕ್ಷಾಯಿಣಿ, 2015ರ ಡಿಸೆಂಬರ್‌ನಲ್ಲಿ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡಿದ್ದರು.

ಘಟನೆಗೆ ಸಂಬಂಧಿಸಿದಂತೆ ದ್ರಾಕ್ಷಾಯಿಣಿ ಕುಟುಂಬದವರು ನೀಡಿದ ದೂರಿನ ಮೇರೆಗೆ, ಎಪಿಎಂಸಿ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 304 (ಬಿ)(ವರದಕ್ಷಿಣೆ ಕಿರುಕುಳ ಸಾವು) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಎಸಿಪಿ ಎಸ್‌.ಬಿ. ಛಬ್ಬಿ ಪ್ರಕರಣದ ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ ಎನ್. ಆರೋಪಿಗಳ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಿ ಆದೇಶ ಹೊರಡಿಸಿದರು. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಜಿ. ಹೊಸಮನಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.