ಕಲಘಟಗಿ: ಕಾಡಿನಿಂದ ನಾಡಿಗೆ ಬಂದ ಆರು ಆನೆಗಳ ಹಿಂಡು, ತಾಲ್ಲೂಕಿನ ಅರಣ್ಯದಂಚಿನ ಬಿರವಳ್ಳಿ ಗ್ರಾಮದ ರೈತರ ಹೊಲದಲ್ಲಿ ಬುಧವಾರ ಬೀಡುಬಿಟ್ಟಿವೆ. ಇವುಗಳನ್ನು ಕಾಡಿನತ್ತ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಪ್ರಯತ್ನ ನಡೆಸಿದ್ದಾರೆ.
ಈ ಆನೆಗಳ ಹಿಂಡು ಮಂಗಳವಾರ ರಾತ್ರಿ ಕಾಡಿನಿಂದ ಬಂದಿದ್ದು, ಬುಧವಾರ ಬೆಳಿಗ್ಗೆ ರೈತರು ತಮ್ಮ ಜಮೀನಿಗೆ ಕೆಲಸಕ್ಕೆ ಹೋದಾಗ ಆನೆಗಳ ಹಿಂಡು ಕಂಡು ಭಯಭೀತರಾಗಿದ್ದಾರೆ. ಒಂದು ಮರಿ ಆನೆಯೂ ಹಿಂಡಿನಲ್ಲಿರುವುದರಿಂದ ಮನುಷ್ಯರನ್ನು ಕಂಡ ಆನೆಗಳೂ ಭಯದಿಂದ ದಾಳಿಗೆ ಮುಂದಾಗಿದ್ದವು ಎಂದೆನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು, ಹಿಂಡನ್ನು ಕಾಡಿನತ್ತ ಕಳುಹಿಸಲು ಕಾರ್ಯಾಚರಣೆ ನಡೆಸಿದರು. ಬುಧವಾರ ಸಂಜೆಯವರೆಗೂ ಅರಣ್ಯಾಧಿಕಾರಿಗಳ ಪ್ರಯತ್ನ ಮುಂದುವರೆದಿತ್ತು. ಆನೆಗಳು ಕಾಡಿಗೆ ಮರಳುವವರೆಗೂ ಆನೆಗಳಿರುವ ಸ್ಥಳಕ್ಕೆ ಹಾಗೂ ಹೊಲಗಳಿಗೆ ಹೋಗದಂತೆ ಸೂಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ತಿಳಿಸಿದರು.
ಡ್ರೋನ್ ಮೂಲಕ ಆನೆಗಳ ಚಲನವಲನ ಕುರಿತು ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.