
HDFC ಬ್ಯಾಂಕ್
ಧಾರವಾಡ: ಗ್ರಾಹಕಿಯ ಖಾತೆಯಿಂದ ಕಡಿತಗೊಳಿಸಿದ್ದ ಹಣವನ್ನು ವಾಪಸ್ ಜಮೆ ಮಾಡದ ಪ್ರಕರಣದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಗ್ರಾಹಕಿ ಖಾತೆಗೆ 15 ದಿನಗಳೊಳಗೆ ಹಣವನ್ನು ಸಂದಾಯ ಮಾಡುವಂತೆ ಆದೇಶಿಸಿದೆ.
ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ಪರಿಹಾರ ₹ 50 ಸಾವಿರ, ಪ್ರಕರಣದ ವೆಚ್ಚ ₹ 10 ಸಾವಿರ ನೀಡಬೇಕು. ಖಾತೆಯಿಂದ ಕಡಿತಗೊಳಿಸಿದ್ದ ₹ 1.07 ಲಕ್ಷವನ್ನು ಜಮೆ ಮಾಡಬೇಕು. 15 ದಿನಗಳೊಳಗೆ ಜಮೆ ಮಾಡದಿದ್ದರೆ ವಾರ್ಷಿಕ ಶೇ 8 ಬಡ್ಡಿ ಲೆಕ್ಕ ಹಾಕಿ ಮೊತ್ತ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ?: ಧಾರವಾಡದ ಮರಾಠ ಕಾಲೊನಿಯ ವಿದ್ಯಾ ರಾಯ್ಕರ ಅವರು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರು. ಜುಲೈ 3ರಂದು ಖಾತೆಯಿಂದ ಅವರಿಗೆ ಗೊತ್ತಿಲ್ಲದೆ ಎಂಟು ವಹಿವಾಟುಗಳು ನಡೆದಿವೆ. ₹ 1.55 ಲಕ್ಷ ಕಡಿತವಾಗಿತ್ತು. ಈ ಪೈಕಿ ₹ 48 ಸಾವಿರ ಅದೇ ದಿನ ಖಾತೆಗೆ ವರ್ಗಾವಣೆಯಾಗಿತ್ತು.
ವಿದ್ಯಾ ಅವರು ಖಾತೆಯಿಂದ ಹಣ ಕಟಾವು ಮಾಡಿರುವ ವಿಚಾರವನ್ನು ಬ್ಯಾಂಕ್ನವರ ಗಮನಕ್ಕೆ ತಂದಿದ್ದರು. ಮೂರು ದಿನದಲ್ಲಿ ಸರಿಪಡಿಸುವುದಾಗಿ ಬ್ಯಾಂಕ್ನವರು ಅವರಿಗೆ ತಿಳಿಸಿದ್ದರು. ಆದರೆ, ಸರಿಪಡಿಸಿರಲಿಲ್ಲ. ವಿದ್ಯಾ ಅವರು ಉಪನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ನಂತರ, ಸೆಪ್ಟೆಂಬರ್ 1ರಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.