ಹುಬ್ಬಳ್ಳಿ: ಓಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆಯುವವರ ಸಂಖ್ಯೆ ಎರಡ್ಮೂರು ದಿನಗಳಿಂದ ಹೆಚ್ಚಾಗಿದ್ದು, ಕರೆದರೆ ಮನೆಗೂ ಹೋಗಿ ಲಸಿಕೆ ಹಾಕುತ್ತೇವೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಬುಧವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮಂಗಳವಾರ ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಲಸಿಕೆ ಪಡೆದಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಿಸಲು ವಿಶೇಷ ಶಿಬಿರ ಆಯೋಜಿಸಲಾಗುವುದು. ಧಾರ್ಮಿಕ ಮುಖಂಡರ ಜೊತೆಗೂ ಚರ್ಚಿಸಲಾಗುತ್ತಿದೆ. ಲಸಿಕೆ ನೀಡುವಂತೆ ಕರೆದರೆ ನಮ್ಮ ಸಿಬ್ಬಂದಿ ಮನೆಮನೆಗೆ ಹೋಗುತ್ತಾರೆ’ ಎಂದರು.
‘ಎಸ್ಡಿಎಂ ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಮೂರು ದಿನಗಳಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಕಿಮ್ಸ್ನಲ್ಲಿ ಪರೀಕ್ಷೆಗೆ ಒಳಗಾಗಿದ್ದ ನಾಲ್ವರಲ್ಲಿ ಕೋವಿಡ್ ದೃಢವಾಗಿದೆ. ಜಿಲ್ಲೆಯ ಶಾಲಾ, ಕಾಲೇಜುಗಳು ಮತ್ತು ವಸತಿ ನಿಲಯಗಳ ಮೇಲೆ ನಿಗಾ ವಹಿಸಲಾಗಿದೆ’ ಎಂದು ತಿಳಿಸಿದರು.
‘ವಿದೇಶದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಮಹಾರಾಷ್ಟ್ರದಿಂದ ರೈಲಿನಲ್ಲಿ ಜಿಲ್ಲೆಗೆ ಬರುವ ಪ್ರಯಾಣಿಕರ ಮೇಲೂ ವಹಿಸಲಾಗುವುದು. ನಿತ್ಯ 5000 ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ’ ಎಂದರು.
ಎಸ್ಡಿಎಂನಲ್ಲಿ ಕೋವಿಡ್ ಪ್ರಕರಣಗಳಾದರೂ ಅಲ್ಲಿನ ಕಲ್ಯಾಣ ಮಂಟಪದಲ್ಲಿ ಮದುವೆಗೆ ಅವಕಾಶ ನೀಡಲಾಗಿದೆಯಲ್ಲ ಎನ್ನುವ ಪ್ರಶ್ನೆಗೆ, ‘ಕಲ್ಯಾಣ ಮಂಟಪದ ಎಲ್ಲಾ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್ ಇದೆ. 100 ಜನರಿಗಷ್ಟೇ ಅವಕಾಶ ಕೊಡಲಾಗಿದೆ. ಎರಡೂ ಡೋಸ್ ಪಡೆದವರು ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು’ ಎಂದು ಸೂಚಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.