
ಎಚ್.ಕೆ.ಪಾಟೀಲ
ಧಾರವಾಡ: ‘ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ, ಬದಲಾವಣೆ ಸಂಬಂಧಿಸಿದಂತೆ ನಾವು ಮಾತನಾಡದಂತೆ ಪಕ್ಷ ನಿರ್ಬಂಧ ವಿಧಿಸಿದೆ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಪ್ರತಿಕ್ರಿಯಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವ ಸಂಪುಟ ವಿಸ್ತರಣೆ ಅಥವಾ ಬದಲಾವಣೆ ಮಾಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಆ ನಿಟ್ಟಿನಲ್ಲಿ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನಿಸುವ ಪದ್ಧತಿ ಪಕ್ಷದಲ್ಲಿದೆ. ಹಳಬರನ್ನು ಕೈಬಿಡುವ ಮತ್ತು ಹೊಸಬರಿಗೆ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿಯವರೇ ಉತ್ತರ ನೀಡಬೇಕು’ ಎಂದರು.
‘ಅಭಿವೃದ್ಧಿ ಕೆಲಸದ ಬಗ್ಗೆ ಬಿಜೆಪಿಯವರಿಗೆ ಆಸಕ್ತಿ ಇಲ್ಲ. ಸಣ್ಣ ವಿಷಯಗಳನ್ನೇ ಪದೇಪದೇ ಹೇಳುವುದು, ‘ಹಿಟ್ ಅಂಡ್ ರನ್’ನಂಥ ಆರೋಪ ಮಾಡುವುದರಲ್ಲಿ ಬಿಜೆಪಿಯವರು ತೊಡಗಿದ್ದಾರೆ’ ಎಂದು ದೂರಿದರು.
‘ಆಡಳಿತ ಪಕ್ಷದ ತಪ್ಪುಗಳನ್ನು ತೋರಿಸುವ, ಅಭಿವೃದ್ಧಿ ಕೆಲಸಕ್ಕೆ ಚ್ಯುತಿಯಾಗಿದ್ದರೆ ಟೀಕಿಸುವ ಕೆಲಸವನ್ನು ಬಿಜೆಪಿಯವರು ಮಾಡಬೇಕು. ಆದರೆ, ಅವರು ಸದನದೊಳಗೂ, ಹೊರಗೂ ಅದನ್ನು ಅವರು ಮಾಡಲ್ಲ. ರಚನಾತ್ಮಕ ವಿರೋಧ ಪಕ್ಷಗಳಾಗಿ ಬಿಜೆಪಿ, ಜೆಡಿಎಸ್ ಕೆಲಸ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.