ADVERTISEMENT

ವರ್ಷವಾದರೂ ಕರಗದ ಗಣೇಶ ಮೂರ್ತಿಗಳು; ಬಾವಿಯಲ್ಲಿ ಅವಶೇಷ

​ಪ್ರಜಾವಾಣಿ ವಾರ್ತೆ
ಜಿ.ಎನ್.ನಾಗರಾಜ್
Published 10 ಆಗಸ್ಟ್ 2025, 3:20 IST
Last Updated 10 ಆಗಸ್ಟ್ 2025, 3:20 IST
ಹುಬ್ಬಳ್ಳಿಯ ಹೊಸೂರಿನ ಗಣೇಶ ಬಾವಿಯಲ್ಲಿ ಕಳೆದ ವರ್ಷ ವಿಸರ್ಜನೆ ಮಾಡಿದ್ದ ಗಣೇಶಮೂರ್ತಿ ಇನ್ನೂ ಕರಗಿಲ್ಲ
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಹೊಸೂರಿನ ಗಣೇಶ ಬಾವಿಯಲ್ಲಿ ಕಳೆದ ವರ್ಷ ವಿಸರ್ಜನೆ ಮಾಡಿದ್ದ ಗಣೇಶಮೂರ್ತಿ ಇನ್ನೂ ಕರಗಿಲ್ಲ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಇಲ್ಲಿಯ ಹೊಸೂರಿನ ಗಣೇಶ ಬಾಯಿಯಲ್ಲಿ ಕಳೆದ ವರ್ಷ ವಿಸರ್ಜನೆ ಮಾಡಿರುವ ಪಿಒಪಿ ಗಣೇಶ ಮೂರ್ತಿಗಳು ಇನ್ನೂ ಕರಗಿಲ್ಲ. ಜಿಲ್ಲಾಡಳಿತ ಎಷ್ಟೇ ಕಠಿಣ ಕ್ರಮಕೈಗೊಂಡರೂ, ಕೆಲವು ಸಮಿತಿಗಳು ಪಿಒಪಿಯಿಂದಲೇ ತಯಾರಿಸುವ ಬೃಹತ್‌ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತವೆ ಎನ್ನಲು ಇದು ಸ್ಪಷ್ಟ ನಿದರ್ಶನ.

ವರ್ಷ ಕಳೆದರೂ ಪುಷ್ಕರಣಿಯಲ್ಲಿ ಮೂರ್ತಿಗಳ ಅವಶೇಷಗಳು ಹಾಗೆಯೇ ಇವೆ. ಸೊಂಡಿಲು, ಕಾಲು, ಕೈ, ಪೀಠದ ಭಾಗಗಳ ಬಣ್ಣ ಸಹ ಮಾಸಿಲ್ಲ. ಕೆಲವು ಮೂರ್ತಿಗಳು ತುಂಡಾಗಿ ಅರೆಬರೆ ಸ್ಥಿತಿಯಲ್ಲಿ ಇವೆ. ಇನ್ನು ಕೆಲವು ಮೂರ್ತಿಗಳು ಗಟ್ಟಿಮುಟ್ಟಾಗಿದ್ದು, ರಾಸಾಯನಿಕ ಮಿಶ್ರಿತ ಮೂರ್ತಿಗಳು ಎಂದು ಸಾಬೀತುಪಡಿಸುತ್ತಿವೆ. ಇಂದಿರಾ ಗಾಜಿನ ಮನೆ ಉದ್ಯಾನದ ಹಿಂಭಾಗದ ಗಣೇಶ ಬಾವಿಯಲ್ಲೂ ತ್ಯಾಜ್ಯ ತುಂಬಿಕೊಂಡಿವೆ. ಈ ನಡುವೆಯೇ, ಮತ್ತೊಮ್ಮೆ ಗಣೇಶ ಹಬ್ಬ ಎದುರಾಗಿದೆ.

ಪ್ರಸ್ತುತ ವರ್ಷ ಹಬ್ಬಕ್ಕಿಂತ ಒಂದೂವರೆ ತಿಂಗಳು ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುತ್ತಿದೆ. ಈಗಾಗಲೇ ಧಾರವಾಡ, ಗರಗ, ಅಣ್ಣಿಗೇರಿ ಭಾಗಗಳಲ್ಲಿ ಸಂಗ್ರಹಿಸಿಟ್ಟಿದ್ದ ಎರಡು ನೂರಕ್ಕೂ ಹೆಚ್ಚು ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಲಾಗಿದೆ. ಆದರೂ, ನಗರ ಹಾಗೂ ಹೊರವಲಯದ ಕೆಲವು ಕಡೆ ಪಿಒಪಿ ಮಿಶ್ರಿತ ಬೃಹತ್‌ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ ಎನ್ನುವ ಆರೋಪ ಸಾಮಾನ್ಯವಾಗಿದೆ.

ADVERTISEMENT

ಕೆಲ ದಿನಗಳ ಹಿಂದೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಹಾನಗರ ಪಾಲಿಕೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರೊಬ್ಬರು, ‘ದೊಡ್ಡ ಗಾತ್ರದ ಗಣಪ ಮೂರ್ತಿಗಳನ್ನು ಪಿಒಪಿಯಿಂದ ತಯಾರಿಸಿ, ಪೆಂಡಾಲ್‌ಗಳಲ್ಲಿ ಪ್ರತಿಷ್ಠಾಪಿಸುತ್ತಾರೆ. ಅದಕ್ಕೇನು ಕ್ರಮ ಕೈಗೊಳ್ಳುತ್ತೀರಿ’ ಎಂದು ಪ್ರಶ್ನಿಸಿದ್ದರು.

‘ಪ್ರತಿವರ್ಷವೂ ಪಿಒಪಿ ಮೂರ್ತಿ ನಿಷಿದ್ಧ ಎಂದು ಹೇಳುತ್ತಾರೆಯೇ ಹೊರತು, ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಮೂರ್ತಿ ಖರೀದಿಸಿರುವ ಬಗ್ಗೆ ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂದು ಜಿಲ್ಲಾಡಳಿತ ಹೇಳಿದೆ. ಖರೀದಿಸಿದ ಮೂರ್ತಿಗಳಿಗೆ ರಸೀದಿ ಪಡೆದರೂ, ಪ್ರತಿಷ್ಠಾಪನೆ ಮಾಡಿದ ನಂತರ ಅದು ಪಿಒಪಿಯದ್ದೆ ಎಂದು ಸಾಬೀತಾದರೆ ತೆರವು ಮಾಡುವುದು ಅಸಾಧ್ಯ. ಧಾರ್ಮಿಕ ಭಾವನೆ ಅಡ್ಡ ಬರುತ್ತದೆ. ಆಗ, ಮೂರ್ತಿ ತಯಾರಿಸಿದ ಅಥವಾ ಪ್ರತಿಷ್ಠಾಪಿಸಿದ ಸಮಿತಿಗೆ ಕಾನೂನು ಅಡಿ ಕ್ರಮ ಕೈಗೊಳ್ಳಬಹುದಷ್ಟೇ’ ಎಂದು ಪರಿಸರವಾದಿ ಡಾ.ಮಹಾಂತೇಶ ತಪಶೆಟ್ಟಿ ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು, ‘ಸುಪ್ರೀಂ ಕೋರ್ಟ್‌ ಮಾರ್ಗದರ್ಶನದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗುತ್ತಿದೆ. ಕೆಲವೆಡೆ ದಾಳಿ ನಡೆಸಿ, ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದೇವೆ. ಪರಿಸರ ನಮ್ಮದು ಎನ್ನುವ ಭಾವನೆ ಸಾರ್ವಜನಿಕರಲ್ಲೂ ಇರಬೇಕು. ಜವಾಬ್ದಾರಿ ಸ್ಥಾನದಲ್ಲಿ ನಿಂತು ಉತ್ಸವ ಆಚರಿಸುವ ಸಮಿತಿಗಳು ಸಹ ಅರ್ಥ ಮಾಡಿಕೊಳ್ಳಬೇಕು. ಜಲಮೂಲಕ್ಕೆ ರಾಸಾಯನಿಕ ಸೇರದಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ’ ಎಂದರು.

ಹುಬ್ಬಳ್ಳಿಯ ಗ್ಲಾಸ್‌ಹೌಸ್‌ ಹಿಂಭಾಗ ಇರುವ ಗಣೇಶ ಬಾವಿಯಲ್ಲಿರುವ ತ್ಯಾಜ್ಯದ ರಾಶಿ
ಮಹಾರಾಷ್ಟ್ರ ಸೊಲ್ಲಾಪುರ ಭಾಗಗಳಿಂದಲೇ ಹೆಚ್ಚಾಗಿ ಪಿಒಪಿ ಮೂರ್ತಿಗಳು ಬರುತ್ತವೆ. ಅವುಗಳ ನಿಯಂತ್ರಣಕ್ಕೆ ಟಾಸ್ಕ್‌ಫೋರ್ಸ್‌ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ.
– ದಿವ್ಯಪ್ರಭು, ಜಿಲ್ಲಾಧಿಕಾರಿ
ಹೊರ ಜಿಲ್ಲೆಗಳಿಂದ ಬರುವ ಪಿಒಪಿ ಮೂರ್ತಿಗಳ ನಿರ್ಬಂಧಕ್ಕೆ ನಗರದ ಗಡಿ ಪ್ರದೇಶಗಳಲ್ಲಿ ಚೆಕ್‌ ಪೋಸ್ಟ್‌ ಹಾಕಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಕಾರ್ಯಾಚರಣೆಗೆ ಸಹಕರಿಸಲಾಗುವುದು
– ಮಹಾನಿಂಗ ನಂದಗಾವಿ, ಡಿಸಿಪಿ
ಹುಬ್ಬಳ್ಳಿ ಧಾರವಾಡ ಗ್ರಾಮೀಣ ಭಾಗಗಳಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡ ಮೂರ್ತಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾರ್ವಜನಿಕರು ಸಹ ಜಾಗೃತರಾಗಬೇಕು.
–ಜಗದೀಶ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದಂತೆ ಗಣೇಶೋತ್ಸವ ಮಹಾಮಂಡಳದ ಎಲ್ಲ ಸಮಿತಿಗಳಿಗೆ ಸೂಚನೆ ನೀಡಿದ್ದೇವೆ. ಮತ್ತೊಮ್ಮೆ ಸಭೆ ನಡೆಸಿ ಮಾಹಿತಿ ನೀಡಲಾಗುವುದು.
– ಅಮರೇಶ ಹಿಪ್ಪರಗಿ, ಕಾರ್ಯದರ್ಶಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ

‘ಸಿಬ್ಬಂದಿ ಕೊರತೆ ಪಿಒಪಿ ಮೂರ್ತಿ ಜಿಲ್ಲೆಗೆ ಪ್ರವೇಶ’

ಧಾರವಾಡ ಜಿಲ್ಲೆಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಈಗಿರುವ ಜಿಲ್ಲಾ ಅಧಿಕಾರಿ ಜಗದೀಶ ಕೆ. ಅವರಿಗೆ ಗದಗ ಮತ್ತು ಧಾರವಾಡ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ.

‘ಪೊಲೀಸ್‌ ಇಲಾಖೆ ಗಡಿ ಭಾಗಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಹಾಕಿ ಪರಿಶೀಲನೆ ನಡೆಸುತ್ತಿದೆ. ಆದರೆ ಜಿಲ್ಲೆಗೆ ಪ್ರವೇಶಿಸುವ ಮೂರ್ತಿಗಳು ಪಿಒಪಿಯದ್ದೋ ಅಲ್ಲವೋ ಎಂದು ಪರೀಕ್ಷಿಸಲು ಅಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಯಿಲ್ಲ. ಪೊಲೀಸರಿಗೆ ಅನುಮಾನ ಬಂದರೆ ಮಾತ್ರ ಮಂಡಳಿಗೆ ಕರೆ ಮಾಡಿ ತಿಳಿಸುತ್ತಾರೆ. ಹೀಗಾಗಿ ಎಷ್ಟೋ ಪಿಒಪಿ ಮೂರ್ತಿಗಳು ನಗರ ಹಾಗೂ ಜಿಲ್ಲೆಯನ್ನು ಪ್ರವೇಶಿಸಿವೆ’ ಎಂದು ಪೊಲೀಸ್‌ ಮೂಲಗಳು ಹೇಳುತ್ತೇವೆ.

‘ಪಿಒಪಿ ಮೂರ್ತಿ ನಿರ್ಬಂಧಕ್ಕೆ ಮತ್ತು ಸಿಬ್ಬಂದಿ ಕೊರತೆಗೆ ಯಾವ ಸಂಬಂಧವೂ ಇಲ್ಲ. ಅನುಮಾನ ಬಂದ ಮೂರ್ತಿಗಳ ಬಗ್ಗೆ ಚೆಕ್‌ಪೋಸ್ಟ್‌ನಲ್ಲಿರುವ ಪೊಲೀಸ್‌ ಸಿಬ್ಬಂದಿ ನಮಗೆ ಮಾಹಿತಿ ನೀಡುತ್ತಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಗದೀಶ ಕೆ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.