ADVERTISEMENT

ಧಾರವಾಡ | ಜಂಟಿ ಸಮೀಕ್ಷೆ; ಸರ್ಕಾರಕ್ಕೆ ಪ್ರಸ್ತಾವ: ಸಂತೋಷ ಎಸ್‌.ಲಾಡ್‌

ಜಮೀನು, ಗದ್ದೆಗಳಿಗೆ ಕಾಡು ಹಂದಿ ದಾಳಿ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:03 IST
Last Updated 2 ಸೆಪ್ಟೆಂಬರ್ 2025, 4:03 IST
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮ ಸಮೀಪ ಗದ್ದೆಗೆ ಕಾಡು ಹಂದಿಗಳು ದಾಳಿ ಮಾಡಿ ಕಬ್ಬು ಹಾಳುಗೆಡವಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌.ಲಾಡ್‌ ಅವರು ಸೋಮವಾರ ವೀಕ್ಷಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು ಜತೆಗಿದ್ದರು ಪ‍್ರಜಾವಾಣಿ ಚಿತ್ರ
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮ ಸಮೀಪ ಗದ್ದೆಗೆ ಕಾಡು ಹಂದಿಗಳು ದಾಳಿ ಮಾಡಿ ಕಬ್ಬು ಹಾಳುಗೆಡವಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌.ಲಾಡ್‌ ಅವರು ಸೋಮವಾರ ವೀಕ್ಷಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು ಜತೆಗಿದ್ದರು ಪ‍್ರಜಾವಾಣಿ ಚಿತ್ರ    

ಧಾರವಾಡ: ‘ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮ ಭಾಗದ ಜಮೀನುಗಳಿಗೆ ಕಾಡುಹಂದಿಗಳು ದಾಳಿ ಮಾಡಿ ಬೆಳೆ ಹಾನಿ ಮಾಡಿವೆ. ಬೆಳೆ ಹಾನಿಗೆ ಸಂಬಂಧಿಸಿದಂತೆ ಅರಣ್ಯ, ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌.ಲಾಡ್‌ ತಿಳಿಸಿದರು.

ಗಳಗಿ ಹುಲಕೊಪ್ಪ ಗ್ರಾಮ ಬಳಿಯ ಜಮೀನಿನಲ್ಲಿ ಬೆಳೆ ಹಾನಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದ ಜ‌ಮೀನುಗಳಿಗೆ ಹಂದಿ ಹಾವಳಿ ಹೆಚ್ಚಾಗಿದೆ. ರೈತರಿಗೆ ಅನಾನುಕೂಲವಾಗಿದೆ. ಸಮಸ್ಯೆಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು. ಬೆಳೆ ಹಾನಿ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು’ ಎಂದರು.

‘ಕಾಡು ಹಂದಿಗಳಿಂದ ರಕ್ಷಣೆ ಒದಗಿಸಲು ಈ ಭಾಗದಲ್ಲಿ ಗಸ್ತು ವ್ಯವಸ್ಥೆಗೆ ಈ ಅರಣ್ಯಾಧಿಕಾರಿಗಳ ಜತೆ ಚರ್ಚಿಸಲಾಗುವುದು. ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಬೆಳೆ ಹಾನಿ ವೀಕ್ಷಣೆಗೆ ರಾಜ್ಯ ಸಮಿತಿ ಜಿಲ್ಲೆಗೆ ಭೇಟಿ ನೀಡಿದೆ. ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಸುಮಾರು 80 ಸಾವಿರ ಹೆಕ್ಟೇರ್‌ ಹೆಸರು ಬೆಳೆ ಹಾನಿಯಾಗಿದೆ. ಸಮಿತಿಯವರು ಸಮೀಕ್ಷೆ ನಡೆಸಿ ಬೆಳೆ ಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವರು’ ಎಂದರು.

ಬೆಳೆ ಹಾನಿ ‌ವೀಕ್ಷಣೆ

ಗಳಗಿ ಹುಲಕೊಪ್ಪ ಗ್ರಾಮ ಭಾಗದ ಗದ್ದೆ ಜಮೀನುಗಳಲ್ಲಿ ಕಾಡು ಹಂದಿಗಳು ದಾಳಿ ಮಾಡಿ ಕಬ್ಬು ಮುಸುಕಿನ ಜೋಳ ಹಾಳುಗೆಡವಿರುವುದನ್ನು ಸಚಿವ ಸಂತೋಷ್‌ ಲಾಡ್‌ ವೀಕ್ಷಿಸಿದರು. ಹಂದಿಗಳು ಮುಸುಕಿನ ಜೋಳದ ತೆನೆಗಳನ್ನು ಗಿಡಗಳನ್ನು ಮುರಿದಿರುವುದನ್ನು ರೈತರು ಸಚಿವರಿಗೆ ತೋರಿಸಿದರು. ಈ ಬಾಗದಲ್ಲಿ ಕರಡಿ ಕಾಡುಹಂದಿ ಚಿರತೆಗಳ ಉಪಟಳ ಹೆಚ್ಚಾಗಿದೆ. ಬೆಳೆಗಳನ್ನು ಕಾಪಾಡಿಕೊಳ್ಳುವುದು ಸವಾಲಾಗಿದೆ. ಬೆಳೆ ಹಾನಿಗೆ ಪರಿಹಾರ ಕೊಡಿಸಬೇಕು ಎಂದು ರೈತರು ಮನವಿ ಮಾಡಿದರು. ‘ಒಂದೂವರೆ ಎಕರೆಯಲ್ಲಿ ಮುಸುಕಿನ ಜೋಳ ಬೆಳೆದಿದ್ದೇನೆ. ಸತತ ಮಳೆಯಿಂದಾಗಿ ಸ್ವಲ್ಪ ಬೆಳೆ ಹಾಳಾಗಿತ್ತು. ಈಗ ಹಂದಿಗಳು ದಾಳಿ ಇಟ್ಟು ಮತ್ತುಷ್ಟ ಬೆಳೆ ಹಾಳು ಮಾಡಿವೆ. ಬೀಜ ಗೊಬ್ಬರ ಬೇಸಾಯ ಎಲ್ಲದಕ್ಕೂ ಸುಮಾರು ₹40 ಸಾವಿರ ಖರ್ಚು ಮಾಡಿದ್ದೇನೆ. ಬೆಳೆ ಹಾನಿಯಾಗಿ ಮಾಡಿದ ಖರ್ಚೂ ಕೈಗೆ ಸಿಗದಂತಾಗಿದೆ’ ಎಂದು ರೈತ ಚನ್ನಬಸಪ್ಪ ಫಕೀರಪ್ಪ ಹಳಿಯಾಳ ಗೋಳು ತೋಡಿಕೊಂಡರು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಉಪ ಅರಣ್ಯಸಂರಕ್ಷಣಾಧಿಕಾರಿ ವಿವೇಕ ಕವರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.