ಹುಬ್ಬಳ್ಳಿ: ನಗರದಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ವರುಣನ ಅಬ್ಬರಕ್ಕೆ ತಗ್ಗುಪ್ರದೇಶದಲ್ಲಿದ್ದ ಮನೆ-ಅಂಗಡಿಗಳಿಗೆ ನೀರು ನುಗ್ಗಿದೆ.
ವಾಣಿಜ್ಯ ಸಂಕೀರ್ಣಗಳು ಅಪಾರ್ಟ್ಮೆಂಟ್ ಗಳ ತಳಮಹಡಿಗಳು ಜಲಾವೃತಗೊಂಡಿವೆ. ಗ್ರಾಮೀಣ ಭಾಗದಲ್ಲಿ ಕೆಲ ಮನೆಗಳು ಕುಸಿದಿವೆ. ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ.
ಕಟ್ಟಿಕೊಂಡ ಒಳ ಚರಂಡಿ ಮತ್ತು ಅಲ್ಲಲ್ಲಿ ತೆರೆದುಕೊಂಡ ಮ್ಯಾನ್ ಹೋಲ್ ಗಳಿಂದಾಗಿ ಹಲವೆಡೆ ರಸ್ತೆಗಳು ಹಳ್ಳದಂತಾಗಿವೆ. ಅಲ್ಲಲ್ಲಿ ಕಸದ ರಾಶಿ ಬಿದ್ದಿದೆ.
ಮನೆ-ಅಂಗಡಿಗಳಲ್ಲಿ ಸೇರಿದ್ದ ನೀರನ್ನು ಜನರು ಬೆಳಿಗ್ಗೆ ಪೈಪ್ ಮೂಲಕ ಹೊರಹಾಕುತ್ತಿದ್ದ ದೃಶ್ಯ ಕೊಪ್ಪಿಕರ ರಸ್ತೆ, ದೇಶಪಾಂಡೆ ನಗರ, ಹಳೇ ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಂಡುಬಂತು. ನೀರಿನಲ್ಲಿ ಸಿಲುಕಿದ್ದ ಸರಕು- ಸಾಮಾಗ್ರಿಗಳನ್ನು ಆರಿಸಿ, ಸ್ವಚ್ಛಗೊಳಿಸಿದರು.
ಎಮ್ಮೆ ಸಾವು: ತಾಲ್ಲೂಕಿನ ಅಂಚಟಗೇರಿ ಗ್ರಾಮದ ಬಸಪ್ಪ ಮೊರಬದ ಎಂಬುವರ ದನದ ಕೊಟ್ಟಿಗೆ ಕುಸಿದಿದ್ದರಿಂದ ಎಮ್ಮೆ ಮೃತಪಟ್ಟಿದೆ. ಒಂದು ಎತ್ತು ಮತ್ತು ಎರಡು ಆಕಳುಗಳಿಗೆ ಗಂಭೀರ ಗಾಯಗಳಾಗಿವೆ. ಹೆಬಸೂರಿನ ಸರ್ಕಾರಿ ಶಾಲೆಯ ಅಂಗಳ ಜಲಾವೃತಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಹಶೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.