ಹುಬ್ಬಳ್ಳಿ: ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಇಲ್ಲಿನ ರಾಜನಗರದ ಕೆಎಸ್ಸಿಎ ಕ್ರೀಡಾಂಗಣಕ್ಕೆ ತಹಶೀಲ್ದಾರ್ ಮಹೇಶ ಗಸ್ತೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
‘ಕ್ರೀಡಾಕೇಂದ್ರದ ಕಾಮಗಾರಿ ಅಪೂರ್ಣವಾಗಿದೆ. ಪಂದ್ಯಗಳ ಆಯೋಜನೆ, ಮೂಲಸೌಲಭ್ಯ ಸೇರಿ ಇನ್ನಿತರ ವಿಷಯಗಳ ಬಗ್ಗೆ ಕೆಎಸ್ಸಿಎ ಧಾರವಾಡ ವಲಯದ ನಿಮಂತ್ರಕ ನಿಖಿಲ್ ಭೂಸದ್ ಮಾಹಿತಿ ನೀಡಿದ್ದಾರೆ. ಇನ್ನಷ್ಟು ಸಮರ್ಪಕವಾಗಿ ದಾಖಲೆ ಅವರು ಒದಗಿಸಿದ ಬಳಿಕ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಲಾಗುವುದು’ ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ ಗಸ್ತೆ ತಿಳಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಚರ್ಚೆ:
ವಿಧಾನ ಪರಿಷತ್ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಸದಸ್ಯ ಪ್ರದೀಶ ಶೆಟ್ಟರ್, ‘2003ರಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ .ಕೃಷ್ಣ ಅವರು ಕೆಎಸ್ಸಿಎಗೆ ಜಾಗ ನೀಡಿದ್ದರು. ಆ ನಂತರ ಏಳೆಂಟು ವರ್ಷ ಆ ಜಾಗವನ್ನು ಅಭಿವೃದ್ಧಿ ಪಡಿಸಲಿಲ್ಲ. ಕ್ರೀಡಾಂಗಣ ನಿರ್ಮಾಣವಾದ ನಂತರ ಹೆಸರಿಗಷ್ಟೇ ಕೆಲವು ರಣಜಿ ಮತ್ತು ಇನ್ನಿತರ ಪಂದ್ಯಗಳನ್ನು ನಡೆಸಿದರು’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ‘ಹುಬ್ಬಳ್ಳಿ, ಬೆಳಗಾವಿಯಲ್ಲಿ ಕೆಎಸ್ಸಿಎ ಕ್ರೀಡಾಂಗಣ ಇದೆ. ಬೆಳಗಾವಿಯಲ್ಲಿ ಲೋಕೋಪಯೋಗಿ ಇಲಾಖೆ, ಹುಬ್ಬಳ್ಳಿಯಲ್ಲಿ ಕಂದಾಯ ಇಲಾಖೆಯು ಕೆಎಸ್ಸಿಎಗೆ ಜಾಗವನ್ನು 30 ವರ್ಷಗಳ ಅವಧಿಗೆ ಲೀಸ್ ನೀಡಿದೆ. ಆ ಇಲಾಖೆಗಳ ನಡುವೆ ಒಪ್ಪಂದವಾಗಿದೆ. ಅದು ನಮ್ಮ ಸ್ವಾಧೀನದಲ್ಲಿ ಇಲ್ಲ. ಇದರ ಬಗ್ಗೆ ಕೆಎಸ್ಸಿಎ ಸಿಇಒ ಜೊತೆ ಚರ್ಚಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.