ADVERTISEMENT

ಧ್ವನಿವರ್ಧಕ ಬಳಕೆ: ಶೀಘ್ರ ಕ್ರಮ ಎಂದ ಎಡಿಜಿಪಿ‌ ಅಲೋಕ್ ಕುಮಾರ

ಹುಧಾ ಕಮಿಷನರೇಟ್‌ನ ವಿವಿಧ ಠಾಣೆಗಳಿಗೆ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 9:46 IST
Last Updated 3 ಜೂನ್ 2022, 9:46 IST
ಹುಧಾ ಕಮಿಷನರೇಟ್‌ನ ವಿವಿಧ ಪೊಲೀಸ್ ಠಾಣೆಗಳಿಗೆ ಎಡಿಜಿಪಿ ಅಲೋಕ್ ಕುಮಾರ ಶುಕ್ರವಾರ ಭೇಟಿ ನೀಡಿದರು
ಹುಧಾ ಕಮಿಷನರೇಟ್‌ನ ವಿವಿಧ ಪೊಲೀಸ್ ಠಾಣೆಗಳಿಗೆ ಎಡಿಜಿಪಿ ಅಲೋಕ್ ಕುಮಾರ ಶುಕ್ರವಾರ ಭೇಟಿ ನೀಡಿದರು   

ಹುಬ್ಬಳ್ಳಿ: ‘ಧ್ವನಿವರ್ಧಕ ಬಳಕೆ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿನ ಒಂದೆರಡು ಅಂಶಗಳಲ್ಲಿ ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ ತಿಳಿಸಿದರು.

ಹುಧಾ ಕಮಿಷನರೇಟ್‌ನ ವಿವಿಧ ಪೊಲೀಸ್ ಠಾಣೆಗಳಿಗೆ ಶುಕ್ರವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

'ಧ್ವನಿವರ್ಧಕ ಬಳಕೆ ನಿಯಂತ್ರಣ ಕುರಿತು ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ‌. ಪೊಲೀಸ್ ಇಲಾಖೆ ಸಹ ಆ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಸುತ್ತೋಲೆಯಲ್ಲಿನ ತಾಂತ್ರಿಕ ಸಮಸ್ಯೆ ಬಗೆಹರಿಸಿ ಒಂದೆರಡು ದಿನಗಳಲ್ಲಿ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು' ಎಂದರು.

ADVERTISEMENT

'ನನಗೆ ಅಧಿಕಾರ ನೀಡಿದರೆ ಧ್ವನಿವರ್ಧಕ ಆದೇಶ ಪಾಲಿಸದವರಿಗೆ ಗುಂಡು ಹೊಡೆಯುವೆ' ಎಂದು ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಡಿಜಿಪಿ, 'ಮುತಾಲಿಕ ಅವರು ಎಲ್ಲಿ ಆ ಹೇಳಿಕೆ ನೀಡಿದ್ದಾರೆ, ಅದರ ಸ್ಪಷ್ಟ ಉದ್ದೇಶ ಏನೆಂದು ಮಾಹಿತಿ ಪಡೆದು ಪರಿಶೀಲಿಸಲು ಕಮಿಷನರ್'ಗೆ ಸೂಚಿಸುತ್ತೇನೆ' ಎಂದು ಹೇಳಿದರು.

'ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ 11 ಎಫ್ಐಆರ್'ಗೆ ಧಾರವಾಡ ಪೀಠ ನೀಡಿರುವ ತಡೆ ಕುರಿತು ಇದೇ 7ರಂದು ವಿಚಾರಣೆಯಿದೆ. ತಡೆ ತೆರವುಗೊಳಿಸಲು ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ' ಎಂದರು.

ಠಾಣೆಗಳಿಗೆ ಭೇಟಿ, ಪರಿಶೀಲನೆ

ಎಡಿಜಿಪಿ ಅಲೋಕ್ ಕುಮಾರ ಶುಕ್ರವಾರ ಹುಧಾ ಪೊಲೀಸ್ ಕಮಿಷನರೇಟ್'ನ ವಿವಿಧ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿದರು.

ಕೇಶ್ವಾಪುರ, ಬೆಂಡಿಗೇರಿ, ಉಪನಗರ ಠಾಣೆಗಳಿಗೆ ಭೇಟಿ ನೀಡಿದ ಅವರು ಎರಡು ವರ್ಷಗಳ ಅಪರಾಧ ಪ್ರಕರಣಗಳ ಮಾಹಿತಿ ಪಡೆದರು. ಅವುಗಳಲ್ಲಿನ ಗಂಭೀರ ಪ್ರಕರಣಗಳು ಹಾಗೂ ತನಿಖಾ ಹಂತದ ಪ್ರಗತಿ ಪರಿಶೀಲಿಸಿದರು. ರೌಡಿಗಳ ಬಗ್ಗೆ ವಿಶೇಷ ಗಮನವಿಟ್ಟು ಅವರಿಗೆ ಆಗಾಗ ಎಚ್ಚರಿಕೆ ನೀಡುತ್ತಿರಬೇಕು ಎಂದು ಸೂಚಿಸಿದರು.

ಕಮಿಷನರ್ ಲಾಭೂರಾಮ್, ಡಿಸಿಪಿ ಸಾಯಿಲ್ ಬಾಗ್ಲಾ, ಎಸಿಪಿ ವಿನೋದ ಮುಕ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.