
ಹುಬ್ಬಳ್ಳಿ: ಮಹಾಶಿವರಾತ್ರಿ ಪ್ರಯುಕ್ತ ನಗರದೆಲ್ಲೆಡೆಯ ಶಿವನ ದೇವಸ್ಥಾನಗಳಲ್ಲಿ ಭಾನುವಾರ ಮುಂಜಾನೆಯಿಂದಲೇ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ, ಶಿವನಾಮ ಸ್ಮರಣೆ ಹಾಗೂ ಶಿವಧಾನ್ಯ ಕಾರ್ಯಕ್ರಮಗಳು ನಡೆಯಲಿವೆ.
ಇಲ್ಲಿನ ಸಿದ್ಧಾರೂಢ ಮಠ, ಉಣಕಲ್ನ ಚಂದ್ರಮೌಳೇಶ್ವರ ದೇವಾಲಯ, ಉಣಕಲ್ ಕ್ರಾಸ್ನ ರಾಮಲಿಂಗೇಶ್ವರ ದೇವಸ್ಥಾನ, ಕೇಶ್ವಾಪುರದ ಕಾಶಿ ವಿಶ್ವನಾಥ ದೇವಸ್ಥಾನ, ಗೋಕುಲ ರಸ್ತೆಯ ಮಂಜುನಾಥ ನಗರದ ಈಶ್ವರ ದೇಗುಲ, ಇಂಡಿಪಂಪ್ ಬಳಿಯ ಮಂಜುನಾಥೇಶ್ವರ ದೇವಸ್ಥಾನ, ಜಯನಗರದ ಈಶ್ವರ ದೇವಸ್ಥಾನ ಹಾಗೂ ಸ್ಟೇಷನ್ ರಸ್ತೆ, ಶಿವಪುರ ಕಾಲೊನಿ ಹಾಗೂ ವಿಶ್ವೇಶ್ವರ ನಗರ ಸೇರಿದಂತೆ ನಗರದೆಲ್ಲೆಡೆ ಇರುವ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಅಹೋರಾತ್ರಿ ಜಾಗರಣೆ ಕಾರ್ಯಕ್ರಮಗಳು ಭಕ್ತಿಯಿಂದ ನಡೆಯಲಿವೆ.
ಶಿವರಾತ್ರಿ ಉತ್ಸವದ ಪ್ರಯುಕ್ತ ಸಿದ್ಧಾರೂಢ ಮಠವನ್ನು ಈಗಾಗಲೇ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ. ಕಳೆದ ಕೆಲ ದಿನಗಳಿಂದಲೇ ಮಠದಲ್ಲಿ ವಿಶೇಷ ಪೂಜೆ ಹಾಗೂ ಸಂಗೀತ, ನೃತ್ಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲಿವೆ.
ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಸಿದ್ಧಾರೂಢ ಮಠದಲ್ಲಿ ಮಧ್ಯಾಹ್ನ 12ಕ್ಕೆ ಪಲ್ಲಕ್ಕಿ ಉತ್ಸವ ಆರಂಭವಾಗಿ ಗಣೇಶಪೇಟೆಯಲ್ಲಿರುವ ಜಡಿಸ್ವಾಮಿ ಮಠಕ್ಕೆ ಹೋಗಿ ಮರಳಿ ಮಠಕ್ಕೆ ಬರುವುದು. ಫೆ.16ರಂದು ಸೋಮವಾರ ಸಂಜೆ ಅದ್ಧೂರಿಯಾಗಿ ರಥೋತ್ಸವ ನಡೆಯಲಿದೆ.
ಉಣಕಲ್ನ ಚಂದ್ರಮೌಳೇಶ್ವರ ದೇವಾಲಯದಲ್ಲಿಯೂ ಶಿವಲಿಂಗಕ್ಕೆ ರುದ್ರಾಭಿಷೇಕ ನಡೆಯಲಿದೆ. ಕೆಲ ಭಕ್ತರು ಶಿವಲಿಂಗಕ್ಕೆ ಅಭಿಷೇಕ ಸಲ್ಲಿಸಿ, ಜಾಗರಣೆ ಮಾಡುವ ಮೂಲಕ ಮಹಾಶಿವರಾತ್ರಿ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
ಶಿವರಾತ್ರಿ ಪ್ರಯುಕ್ತ ಇಲ್ಲಿನ ದುರ್ಗದ ಬೈಲ್, ಜನತಾ ಬಜಾರ್ ಸೇರಿದಂತೆ ಹಳೇ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಶನಿವಾರ ಹೂವು, ಹಣ್ಣುಗಳ ವ್ಯಾಪಾರ ತುಸು ಜೋರಾಗಿಯೇ ನಡೆಯಿತು. ಮಲ್ಲಿಗೆ, ಸೇವಂತಿಗೆ, ಗುಲಾಬಿ, ಕನಕಾಂಬರ ಮತ್ತು ಸುಗಂಧರಾಜ ಹೂವುಗಳು ಸೇರಿದಂತೆ ಸೇಬು, ದಾಳಿಂಬೆ, ದ್ರಾಕ್ಷಿ, ಕಿತ್ತಳೆ, ಕಲ್ಲಂಗಡಿ, ಬಾಳೆ, ಪೇರಲಾ, ಪಪ್ಪಾಯ ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದರೂ ಗ್ರಾಹಕರು ಖರೀದಿಸಿದ್ದು ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.