ADVERTISEMENT

ಹುಬ್ಬಳ್ಳಿ| ಮಾರುತಿ ನಗರ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ: ಶಾಸಕ ಪ್ರಸಾದ ಅಬ್ಬಯ್ಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 5:16 IST
Last Updated 9 ನವೆಂಬರ್ 2025, 5:16 IST
ಹುಬ್ಬಳ್ಳಿಯ ಹೆಗ್ಗೇರಿಯಲ್ಲಿನ ಮಾರುತಿ ನಗರದಲ್ಲಿ ಸಿ.ಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ ಭೂಮಿಪೂಜೆ ನೆರವೇರಿಸಿದರು
ಹುಬ್ಬಳ್ಳಿಯ ಹೆಗ್ಗೇರಿಯಲ್ಲಿನ ಮಾರುತಿ ನಗರದಲ್ಲಿ ಸಿ.ಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ ಭೂಮಿಪೂಜೆ ನೆರವೇರಿಸಿದರು   

ಹುಬ್ಬಳ್ಳಿ: ‘ಹೆಗ್ಗೇರಿಯ ಮಾರುತಿ ನಗರದ 5 ಎಕರೆ 28 ಗುಂಟೆ ಜಾಗ ಕಂದಾಯ ಇಲಾಖೆಯಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಗೊಂಡಿದ್ದು, ಶೀಘ್ರ ಅಲ್ಲಿನ ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ ವಾರ್ಡ್ ನಂ– 52ರ ಹೆಗ್ಗೇರಿಯ ಮಾರುತಿ ನಗರದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ₹1 ಕೋಟಿ ಅನುದಾನದಡಿ ಸಿ.ಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮಾರುತಿ ನಗರವನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ತಂದು ಸೌಲಭ್ಯ ಒದಗಿಸಬೇಕು ಎಂದು ಆ ಭಾಗದ ಶಾಸಕರು, ಹು–ಧಾ ಮಹಾನಗರ ಪಾಲಿಕೆ ಸದಸ್ಯರು ಬೇಡಿಕೆ ಇಟ್ಟಿದ್ದರು. ಮನವಿಗೆ ಸ್ಪಂದಿಸಲಾಗಿದ್ದು, ಶೀಘ್ರ ಮಂಡಳಿಯಿಂದ ಸರ್ವೆ ಮಾಡಿಸಿ, ಗಡಿ ಗುರುತಿಸಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಾದ್ಯಂತ ಮಂಡಳಿ ವತಿಯಿಂದ 42 ಸಾವಿರ ಮನೆಗಳು ನಿರ್ಮಾಣವಾಗಿವೆ. ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನ.29ರಂದು ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ರಾಜ್ಯದ ಎಲ್ಲ ಫಲಾನುಭವಿಗಳಿಗೆ ಕೀ ವಿತರಿಸಿ ಮನೆಗಳ ಹಸ್ತಾಂತರಿಸಲಾಗುವುದು’ ಎಂದರು.

ಹು–ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ ಸದಸ್ಯರಾದ ಚೇತನ ಹಿರೇಕೆರೂರ, ಹೆಗ್ಗೇರಿ ಮಾರುತಿ ನಗರದ ಮುಖಂಡರು, ನಿವಾಸಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.