ಹುಬ್ಬಳ್ಳಿ: ಹಣಕ್ಕಾಗಿ ಅಂಧ ಸ್ನೇಹಿತನನ್ನು ಮಚ್ಚಿನಿಂದ ಹತ್ಯೆ ಮಾಡಿದ ನರಗುಂದ ತಾಲ್ಲೂಕಿನ ಶಿರಕೋಳ ಗ್ರಾಮದ ಬಸವರಾಜ ಜಗಳೂರಿಗೆ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿಇಲ್ಲಿನ ಒಂದನೇ ಸೇಷನ್ ಕೋರ್ಟ್ ಆದೇಶ ನೀಡಿದೆ.
ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ನಿವಾಸಿ ಜಗದೀಶ ಶಿರಗುಪ್ಪಿ ಎಂಬುವವರನ್ನು ಬಸವರಾಜ 2015ರ ಮೇ 23ರಂದು ಉಣಕಲ್ ಕೆರೆಯ ಸಿದ್ದಪ್ಪಜ್ಜನ ಗುಡಿಯ ಹಿಂಭಾಗ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಿನ್ನೆಲೆ: ಗದುಗಿನ ಕಾರ್ಪೋರೇಷನ್ ಬ್ಯಾಂಕ್ ಖಾತೆಯಲ್ಲಿದ್ದ ₹1.50 ಲಕ್ಷವನ್ನು ಜಗದೀಶ ಅವರು ಸ್ನೇಹಿತ ಬಸವರಾಜ ಸಹಾಯದಿಂದ ಡ್ರಾ ಮಾಡಿಕೊಂಡು ಬಂದಿದ್ದರು. ಹಣದ ಆಸೆಗಾಗಿ ಉಣಕಲ್ ಕೆರೆ ಬಳಿ ಹತ್ಯೆ ಮಾಡಿ, ₹1.40 ಲಕ್ಷ ದೋಚಿಕೊಂಡು ಪರಾರಿಯಾಗಿದ್ದನು. ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ವಿರುದ್ಧ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್. ಶನಿವಾರ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.
ಮಚ್ಚಿನಿಂದ ಹಲ್ಲೆ: ಕಳವು ಪ್ರಕರಣ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಗದಗ ರಸ್ತೆಯ ವಿನೋಬಾನಗರದ ರಾಹುಲ್ ಬಂಡಿ ಅವರ ಮೇಲೆ ಕೋಪಗೊಂಡ ಇಬ್ಬರು ಮಚ್ಚಿನಿಂದ ಹಲ್ಲೆ ನಡೆಸಿರುವ ಪ್ರಕರಣ ಶನಿವಾರ ಕುಸಗಲ್ ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಸಿಮೆಂಟ್ ಚಾಳದ ಪ್ರಭುರಾಜ ಕೆ. ಮತ್ತು ಜನತಾ ಕ್ವಾರ್ಟರ್ಸ್ನ ಪ್ರಶಾಂತ ಬಿ. ಹಲ್ಲೆ ನಡೆಸಿದ ಆರೋಪಿತರು. ಕಳವು ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಶಯಗೊಂಡ ಆರೋಪಿತರು, ಮಚ್ಚಿನಿಂದ ಎದೆ, ಭುಜದ ಮೇಲೆ ಹಲ್ಲೆ ನಡೆಸಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.