ಧಾರವಾಡದ ಮಾಳಾಪುರದಲ್ಲಿ ಗುರುವಾರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರು ಮೂರ್ತಿಗೆ ಹೂಮಾಲೆ ಅರ್ಪಿಸಿದರು
ಧಾರವಾಡ: ನಗರದ ಮಾಳಾಪುರದಲ್ಲಿ ಗಣೇಶೋತ್ಸವವನ್ನು ಸೌಹಾರ್ದದಿಂದ ಆಚರಿಸಲಾಯಿತು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗಯಲ್ಲಿ ಮುಸ್ಲಿಮರು ಹೂಮಾಲೆ ಹಾಕಿ ನಮಿಸಿದರು.
ಗಜಾನನ ಯುವಕ ಮಂಡಳಿ ವತಿಯಿಂದ ದ್ಯಾಮವ್ವನ ಗುಡಿ ಸಮೀಪ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು. ಭಾವೈಕ್ಯದಿಂದ ಉತ್ಸವ ಆಚರಿಸಿ ಸಂಭ್ರಮಿಸಿದರು.
ಮೆರವಣಿಗೆಯು ಮಾಳಾಪುರದ ಮಸೀದಿ ಬಳಿಗೆ ತಲುಪಿದಾಗ ಮುಸ್ಲಿಂ ಸಮುದಾಯದ ಕೆಲವರು ಮೂರ್ತಿಗೆ ಹೂಮಾಲೆ ಹಾಕಿದರು. ಇದೇ ಸಂದರ್ಭದಲ್ಲಿ ‘ನೀನೇ ರಾಮ, ನೀನೇ ಶಾಮ, ನೀನೇ ಅಲ್ಲಾಹು, ನೀನೇ ಯೇಸು....’ ಹಾಡು ಮೊಳಗಿತು.
‘ಹಿಂದೂ, ಮುಸ್ಲಿಮರು ಎಲ್ಲರೂ ಭಾವೈಕ್ಯದಿಂದ ಹಬ್ಬ ಆಚರಿಸುತ್ತೇವೆ. ಗಣೇಶೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಾರೆ’ ಎಂದು ಗಜಾನನ ಯುವಕ ಮಂಡಳಿ ಅಧ್ಯಕ್ಷ ಜಗದೀಶ ಅಕ್ಕಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಣಪತಿ ಪ್ರತಿಷ್ಠಾಪನೆ, ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತೇವೆ. ಸಿಹಿ ಹಂಚುತ್ತೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ಮಾಳಾಪುರದ ಜಾಫರ್ ಕಳ್ಳಿಮನಿ ತಿಳಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ, ಗುರುರಾಜ, ಗುಮ್ಮಗೋಳಮಠ, ಮಲ್ಲಿಕಾರ್ಜುನ, ಮುಸ್ತಾಕ್ ಅಹಮದ್, ಸೈಯ್ಯದ್ ರಫೀಕ್, ಅಯ್ಯೂಬ್ ಮಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.