ಧಾರವಾಡ: ಲೇಖಕ ನರಸಿಂಹ ಪರಾಂಜಪೆ ಅವರ ಗದ್ಯ ಲೇಖನಗಳ ಸಂಕಲನ ‘ಒಳ ಹರಿವು’ ಕೃತಿಯು ಸಾಹಿತ್ಯಿಕ ಸಂಘಟನೆ ಅನ್ವೇಷಣೆ ಕೂಟದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿತು.
ಕೃತಿ ಲೋಕಾರ್ಪಣೆಗೊಳಿಸಿದ ಹಿರಿಯ ಲೇಖಕ ರಾಘವೇಂದ್ರ ಪಾಟೀಲ ಮಾತನಾಡಿ, ‘ಪರಾಂಜಪೆಯವರ ಕಾವ್ಯಗಳ ಈ ಹಿಂದಿನ ಸುದೀರ್ಘ ಪಯಣ ಅವಲೋಕಿಸಿದಾಗ ಆಳವಾದ ವಿಷಾದ ಭಾವ ಅವರ ರಚನೆಗಳಲ್ಲಿದೆ.ಅವರ ಗದ್ಯ ಕೃತಿ ಒಳ ಹರವಿನಲ್ಲಿ ಅದು ರಮ್ಯ ಭಾವದತ್ತ ಹೊರಳಿದ್ದನ್ನು ಕಾಣಬಹುದಾಗಿದೆ’ ಎಂದರು.
ಪುಸ್ತಕ ಪರಿಚಯ ಮಾಡಿದ ಹಿರೇಮಲ್ಲೂರು ಈಶ್ವರನ್ ಕಾಲೇಜಿನ ಪ್ರಾಚಾರ್ಯ ಡಾ. ಶಶಿಧರ ತೋಡ್ಕರ, ‘ತೆರೆ ಒಂದರಲ್ಲಿ ದಿ. ವರದರಾಜ ಹುಯಿಲಗೋಳ, ದಿ. ಪಂಡಿತ ಚಂದ್ರಶೇಖರ ಪುರಾಣಿಕಮಠ, ದಿ. ವಾಡಪ್ಪಿ ಸರ್, ಹಿರಿಯ ಚೇತನ ಭಾಲಚಂದ್ರ ಘಾಣೇಕರ, ವರಕವಿ ಬೇಂದ್ರೆ, ಗ್ರಂಥಾಲಯ ವಿಜ್ಞಾನಿ ಡಾ. ಕೃಷ್ಣ ಎಸ್. ದೇಶಪಾಂಡೆ, ದಿ. ವಿನಾಯಕರಾವ ಜೋಶಿ ಅವರಂಥ ಕನ್ನಡದ ಆದರ್ಶ ಪುತ್ರರ ಯಶೋಗಾಥೆಗಳನ್ನು ಯಥಾವತ್ತಾಗಿ ಪರಾಂಜಪೆಯವರು ಇಲ್ಲಿ ಚಿತ್ರಿಸಿದ್ದಾರೆ’ ಎಂದರು.
‘ತೆರೆ ಎರಡರಲ್ಲಿ ಅರಳಿನಿಂತ ವೈವಿಧ್ಯಮಯ ಸರಳ ಸುಂದರ ಬರಣಿಗೆಗಳು ಚಿತ್ತಾಕರ್ಷಕವಾಗಿವೆ. ಒಟ್ಟಾರೆಯಲ್ಲಿ ಧಾರವಾಡದ ಸಾಹಿತ್ಯಿಕ–ಸಾಂಸ್ಕೃತಿಕ ಬರಹಗಳಿಂದ ತುಂಬಿಕೊಂಡಿರುವ ಈ ಗ್ರಂಥ ಯುವ ಜನಾಂಗಕ್ಕೊಂದು ಕೈದೀವಿಗೆಯಾಗಿದೆ’ ಎಂದರೆ ಉತ್ಪ್ರೇಕ್ಷೆಯ ಮಾತಲ್ಲ ಎಂದರು.
ನಂತರ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಯುವ ಗಾಯಕಿ ಚೈತ್ರಾ ಆಲೂರ ಭಕ್ತಿ ಗೀತೆ, ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಹಾರ್ಮೋನಿಯಂನಲ್ಲಿ ವಿನೋದ ಪಾಟೀಲ, ತಬಲಾದಲ್ಲಿ ಕಲ್ಮೇಶ ಉತ್ತಮ ಸಾಥ್ ನೀಡಿದರು.
ಐವತ್ತು ವರ್ಷದ ದಾಂಪತ್ಯ ಜೀವನ ಪೂರೈಸಿದ ಸೀಮಾ ನರಸಿಂಹ ಪರಾಂಜಪೆ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅನ್ವೇಷಣ ಕೂಟದ ಅಧ್ಯಕ್ಷ ಎನ್.ಟಿ. ಪರಾಂಜಪೆ, ವೆಂಕಟೇಶ ದೇಸಾಯಿ, ಹಿರಿಯ ಸಾಹಿತಿಗಳಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಡಾ. ಬಾಳಣ್ಣ ಶೀಗಿಹಳ್ಳಿ, ಹರ್ಷ ಡಂಬಳ, ಪ್ರೊ. ದೀಪಕ ಆಲೂರ, ಡಾ. ಹ.ವೆಂ. ಕಾಖಂಡಕಿ, ಶ್ರೀನಿವಾಸ ವಾಡಪ್ಪ, ಅನಂಥ ಥಿಟೆ, ಕೆ.ಎನ್. ಹಬ್ಬು, ಅರುಣ ಅಂಗಡಿ, ಪ್ರಕಾಶ ಗೌಡರ, ಕೆ.ವಿ. ಹಾವನೂರ, ಬಿ.ಐ. ಈಳಗೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.