
ನವಲಗುಂದ: ಇಂದಿಗೂ ಎಲ್ಲರ ಮನಸ್ಸಿನಲ್ಲಿ ಉಳಿದಿರುವ ಅದ್ಭುತ ನಟ, ನಿರ್ದೇಶಕನಾಗಿದ್ದ ಶಂಕರನಾಗ ಅವರು ರಂಗಭೂಮಿಯಲ್ಲಿ ಬೆರಗು ಮೂಡಿಸುವ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಅವರು ಸದಾ ಚೈತನ್ಯ ಚಿಲುಮೆಯಾಗಿದ್ದರು ಎಂದು ನವಲಗುಂದ ಪಿಎಸ್ಐ ಜನಾರ್ದನ ಭಟ್ರಳ್ಳಿ ಹೇಳಿದರು.
ಕನ್ನಡ ರಾಜ್ಯೋತ್ಸವ ಮತ್ತು ನಟ ಶಂಕರನಾಗ ಅವರ ಜನ್ಮದಿನದ ಅಂಗವಾಗಿ ಶ್ರೀ ಶಂಕರನಾಗ ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ನೀಲಮ್ಮನ ಜಲಾಶಯ ಬಳಿ ಆಟೊ ರಿಕ್ಷಾ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
‘ಶಂಕರನಾಗ ಅವರಿಗೆ ಅಷ್ಟೇ ಆಯುಷ್ಯವನ್ನು ಭಗವಂತ ಕಲ್ಪಿಸಿದ್ದ. ಆದರೆ ಜನರಿಂದ ಅವರಿಗೆ ಸಿಕ್ಕ ಪ್ರೀತಿ, ಅಭಿಮಾನವನ್ನು ನೀವೆಲ್ಲರೂ ಇಂದೂ ನೋಡುತ್ತಿದ್ದೀರಿ’ ಎಂದರು
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಟೊ ಮೆರವಣಿಗೆ ಸಂಚರಿಸಿ ಬಸ್ ನಿಲ್ದಾಣ ತಲುಪಿತು. ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿಯ ಕಣ್ಣಿನ ಆಸ್ಪತ್ರೆ ಸಿಬ್ಬಂದಿಯಾದ ಪವನ ಚಲವಾದಿ, ಉಷಾ ಆರ್.ಜೆ , ವಿನೋದ ನಾಗರಳ್ಳಿ ಅವರಿಂದ 107 ಜನರ ಉಚಿತ ಕಣ್ಣಿನ ತಪಾಸಣೆ ಜರುಗಿತು.
ಆಟೊ ಚಾಲಕ ಸಂಘದ ಅಧ್ಯಕ್ಷ ರವಿ ಹುಣಸೀಮರದ, ಉಪಾಧ್ಯಕ್ಷ ಮಂಜುನಾಥ ಸುಣಗಾರ, ಮುನ್ನಾ ಕಲಕುಟ್ರಿ , ಶರಣಪ್ಪ ದೊಡ್ಡಮನಿ, ಮಹೆಬೂಬಸಾಬ್ ಬುಕ್ಕಿಟಗಾರ, ರವಿ ಭೋವಿ, ನಿಂಗಪ್ಪ ಈಟಿ, ರಿಯಾಜ ಪಾಗಾ, ಸುರೇಶ ಈಟಿ, ಹನುಮಂತ ತೆಗ್ಗಿ, ರಿಯಾಜ ಕೊಟ್ಟೂರು, ಆನಂದ ಬೆಂಡಿಗೇರಿ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.